ಕಾಸರಗೋಡು:ಕಾಸರಗೋಡಿನಲ್ಲಿ ಕನ್ನಡ ಭವನ ಗ್ರಂಥಾಲಯವನ್ನು ಸ್ಥಾಪಿಸಿ ಕಳೆದ 23 ವರ್ಷಗಳಿಂದ ಕನ್ನಡ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಕರ್ನಾಟಕದಿಂದ ಬರುವ ಕನ್ನಡಿಗರಿಗೆ ತಮ್ಮ ಮನೆಯಲ್ಲೇ ಉಚಿತ ವಸತಿ ಕಲ್ಪಿಸಿರುವ ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯದ ಅಧ್ಯಕ್ಷ ವಾಮನರಾವ್ ಬೇಕಲ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕವು ಅಭಿನಂದಿಸಿತು.
ನುಳ್ಳಿಪಾಡಿಯ ಕನ್ನಡ ಭವನ ಗ್ರಂಥಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆ ತ್ತೋಡಿ ಅವರು ವಾಮನ್ ರಾವ್ ಬೇಕಲ್ ,ಸಂಧ್ಯಾರಾಣಿ ದಂಪತಿಯರನ್ನು ಶಾಲುಹೊದೆಸಿ, ಫಲಪುಷ್ಪ ,ಸ್ಮರಣಿಕೆ ನೀಡಿ ಸನ್ಮಾನಿಸಿದರು. ತನ್ನ ಮನೆಯನ್ನೇ ಗ್ರಂಥಾಲಯವಾಗಿ ಮಾಡಿ , ಕನ್ನಡ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಾ ಕನ್ನಡಸೇವೆ ಮಾಡುವುದರೊಂದಿಗೆ ಡಾಕ್ಟರೇಟ್ ಪದವಿಯನ್ನೂ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಡಾ.ಜಯಪ್ರಕಾಶ್ ಹೇಳಿದರು.
ಕವಿ, ಪತ್ರಕರ್ತ ರಾಧಾಕೃಷ್ಣ ಕೆ .ಉಳಿಯತ್ತಡ್ಕ , ಸಾಹಿತಿ ಸುಕುಮಾರ ಆಲಂಪಾಡಿ, ಬಿ ಇ ಎಂ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ರಾಜೇಶ್ಚಂದ್ರ ಕೆ .ಪಿ ಉಪಸ್ಥಿತರಿದ್ದರು. ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ವಾಮನರಾವ್ ಬೇಕಲ ಪರಿಷತ್ತಿನ ಈ ಸನ್ಮಾನವು ಇನ್ನಷ್ಟು ಕನ್ನಡ ಚಟುವಟಿಕೆಗಳನ್ನು ನಡೆಸಲು ಸ್ಫೂರ್ತಿ ನೀಡಿದೆ ಎಂದು ಹೇಳಿದರು.
ಸಾಹಿತ್ಯಪರಿಷತ್ತಿನ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು.