ಮೈಸೂರು: ಕೆಲವು ತಿಂಗಳುಗಳ ಹಿಂದೆ ಭಾರೀ ವಿವಾದಕ್ಕೆ ಕಾರಣವಾಗಿದ್ದ ಮೈಸೂರಿನ ಕೊರಗಜ್ಜ ದೈವಸ್ಥಾನವನ್ನು ತೆರವುಗೊಳಿಸಲಾಗಿದೆ ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ತುಳುನಾಡಿನ ಸಂಸ್ಕೃತಿಯದ ದೈವಾರಾಧನೆ ಮೈಸೂರಿಗೆ ಕಾಲಿಟ್ಟಿದ್ದರ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಇದೀಗ ದೈವಸ್ಥಾನ ತೆರವಾಗಿದೆ. ಆದರೆ ತೆರವಾಗಿರುವ ಕಾರಣವೇ ಬೇರೆ ಇದೆ.
ಮೈಸೂರು ಜಿಲ್ಲಾಡಳಿತ ಕೊರಗಜ್ಜ ದೈವಸ್ಥಾನವನ್ನು ಕಾರ್ಯಾಚರಣೆ ಮಾಡಿ ತೆರವುಗೊಳಿಸಿದೆ. ರಾಜಾ ಕಾಲುವೆ ಮೇಲೆ ಕೊರಗಜ್ಜ ದೈವಸ್ಥಾನ ನಿರ್ಮಿಸಲಾಗಿತ್ತು. ಕೇರ್ಗಳ್ಳಿ ಗ್ರಾಮದ ಸರ್ವೆ ನಂಬರ್ 60ರಲ್ಲಿ ಹಾದುಹೋಗಿದ್ದ ರಾಜಕಾಲುವೆ ಒತ್ತುವರಿ ಆಗಿದೆ ಎಂಬ ದೂರು ತಾಲೂಕು ಆಡಳಿತಕ್ಕೆ ಬಂದಿತ್ತು. ಅಕ್ರಮವಾಗಿ ದೈವಸ್ಥಾನ ನಿರ್ಮಿಸಲಾಗಿದೆ ಎಂಬ ಮಾಹಿತಿಯಿತ್ತು. ಈ ಕಾರಣದಿಂದಾಗಿ ಮೈಸೂರು ತಾಲೂಕು ಕೇರ್ಗಳ್ಳಿ ಗ್ರಾಮದಲ್ಲಿದ್ದ ಕೊರಗಜ್ಜ ದೈವಸ್ಥಾನವನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ಈ ಕುರಿತ ದಾಖಲೆಗಳನ್ನು ಪರಿಶೀಲಿಸಿದ ಉಪವಿಭಾಗಾಧಿಕಾರಿ ಕೆ. ರಕ್ಷಿತ್, ಒತ್ತುವರಿಯಾಗಿರುವ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ. ಒತ್ತುವರಿಯನ್ನು ತೆರವುಗೊಳಿಸುವಂತೆ ಆದೇಶಿಸಿದ್ದಾರೆ. ಅದರಂತೆ ತಹಸೀಲ್ದಾರ್ ಕೆ.ಎಂ. ಮಹೇಶ್ ಕುಮಾರ್ ರವರು ಜಯಪುರ ಪೊಲೀಸರ ಭದ್ರತೆಯೊಂದಿಗೆ ಕಾರ್ಯಾಚರಣೆ ಮಾಡಿ, ರಾಜಾಕಾಲುವೆಯ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಕೊರಗಜ್ಜ ದೈವಸ್ಥಾನವನ್ನು ನೆಲಸಮಗೊಳಿಸಿ ತೆರವುಗೊಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಜಯಪುರ ಹೋಬಳಿ ಉಪತಹಸೀಲ್ದಾರ್ ನಿಂಗಪ್ಪ, ರಾಜಸ್ವ ನಿರೀಕ್ಷಕರಾದ ಲೋಹಿತ್, ಹೋಬಳಿಯ ಗ್ರಾಮ ಆಡಳಿತ ಅಧಿಕಾರಿಗಳು. ಬೋಗಾದಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ನಗರಮಾಪನ ಯೋಜನಾಧಿಕಾರಿಗಳ ಕಚೇರಿ ಸಿಬ್ಬಂದಿ ಹಾಗೂ ಜಯಪುರ ಪೋಲೀಸ್ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.