ಮಂಗಳೂರು : ಕೋಟೆಕಾರ್ ಸಹಕಾರಿ ಬ್ಯಾಂಕ್ನಲ್ಲಿ ಚಿನ್ನಾಭರಣ ಮತ್ತು ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಮೇಲೆ ಪೊಲೀಸರು ಫೆ. 1ರಂದು ಗುಂಡಿನ ದಾಳಿ ಮಾಡಿದ್ದಾರೆ. ಮಹಜರು ಸಂದರ್ಭ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಮುರುಗನ್ ಡಿ ಮೇಲೆ ಪೊಲೀಸರಿಂದ ಗುಂಡು ಹಾರಿಸಲಾಗಿದೆ. ಮಂಗಳೂರು ಹೊರವಲಯದ ಉಳ್ಳಾಲದ ಅಜ್ಜಿನಡ್ಕ ಎಂಬಲ್ಲಿ ಘಟನೆ ನಡೆದಿದ್ದು, ಸದ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆರೋಪಿ ದರೋಡೆಗೆ ಬಳಸಿದ್ದ ಪಿಸ್ತೂಲ್ ಅನ್ನು ಬಚ್ಚಿಟ್ಟಿದ್ದ. ಅದನ್ನು ರಿಕವರಿ ಮಾಡಲು ಆತನನ್ನು ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಪೊಲೀಸ್ ಕಾನ್ಸ್ಟೆಬಲ್ ಮರ್ಮಾಂಗಕ್ಕೆ ಒದ್ದು ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಿದ್ದಾನೆ. ಪಿಸಿ ಮಂಜುನಾಥ್ಗೆ ಗಾಯವಾಗಿದೆ. ಆರೋಪಿ ಮುರುಗನ್ ಡಿ ದೇವರ್ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಂತೆ ಉಳ್ಳಾಲ ಇನ್ಸ್ಪೆಕ್ಟರ್ ಬಾಲಕೃಷ್ಣ ಆತನ ಕಾಲಿಗೆ ಶೂಟ್ ಮಾಡಿದ್ದಾರೆ. ಜ. 17 ರಂದು ಹಾಡಹಗಲೇ ಮಂಗಳೂರಿನ ಕೋಟೆಕಾರು ಸಹಕಾರಿ ಬ್ಯಾಂಕ್ಗೆ ನುಗ್ಗಿದ ಗ್ಯಾಂಗ್, ಕಾರ್ನಲ್ಲೇ ಎಸ್ಕೆಪ್ ಆಗಿತ್ತು.
ಕೇರಳ ಮೂಲಕ ತಮಿಳುನಾಡು ಸೇರಿದ್ದ ಮುರುಗನ್ ಡಿ. ದೇವರ್, ಯೋಶುವಾ ರಾಜೇಂದ್ರನ್, ಕಣ್ಣನ್ ಮಣಿಯನ್ನ ಇತ್ತೀಚೆಗೆ ತಮಿಳುನಾಡಿನ ತಿರುವನ್ವೇಲಿಯಲ್ಲಿ ಬಂಧಿಸಲಾಗಿತ್ತು. ದರೋಡೆಕೋರರನ್ನ ಇತ್ತೀಚೆಗೆ ಮಂಗಳೂರಿಗೆ ಕರೆದುಕೊಂಡು ಬರಲಾಗುತ್ತಿತ್ತು. ಸಂಜೆ 4.20 ರ ಸುಮಾರಿಗೆ ತಲಪಾಡಿ ಅಲಂಗಾರು ಗುಡ್ಡದ ಬಳಿ ಕರೆತಂದು ಸ್ಥಳ ಮಹಜರು ಮಾಡಲಾಗ್ತಿತ್ತು. ಈ ವೇಳೆ ಪ್ರಮುಖ ಆರೋಪಿ ಕಣ್ಣನ್ ಮಣಿ ಬಿಯರ್ ಬಾಟಲಿಯಿಂದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದ. ಪಿಐ ಬಾಲಕೃಷ್ಣ ಪಿಸಿ ನಿತಿನ್, ಸಿಸಿಬಿ ಸಿಬ್ಬಂದಿ ಅಂಜನಪ್ಪ ಮೇಲೆ ದಾಳಿ ಮಾಡಿದ್ದ. ಕೂಡಲೇ ಅಲರ್ಟ್ ಆದ ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ರಫೀಕ್, ಆರೋಪಿ ಮೇಲೆ ಗುಂಡಿನ ದಾಳಿ ಮಾಡಿದ್ದರು.