ಕಡಬ: ಇಲ್ಲಿನ ಕೋಡಿಂಬಾಳ ಗ್ರಾಮದ ಪುಳಿಕುಕ್ಕು ಎಂಬಲ್ಲಿ ಇಂದು ಮುಂಜಾನೆ ಕುಮಾರಧಾರ ನದಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ, ನದಿ ನಡುವೆ ಸಿಲುಕಿದ್ದ ಬಗ್ಗೆ ವರದಿಯಾಗಿತ್ತು. ಬಳಿಕ ಅವರನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ ಬಗ್ಗೆಯೂ ವರದಿಯಾಗಿತ್ತು. ಇದೀಗ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದ ವಿಚಾರ ಮತ್ತು ಅವರ ಕುರಿತ ಸಂಪೂರ್ಣ ವಿವರ ಲಭ್ಯವಾಗಿದೆ.
ಆತ್ಮಹತ್ಯೆಯಿಂದ ರಕ್ಷಿಸಲ್ಪಟ್ಟ ಯುವಕನನ್ನು ಆಂಧ್ರಪ್ರದೇಶದ ಮಡಕಸಿರ ನಿವಾಸಿ ರವಿಕುಮಾರ್ ಎಂದು ಗುರುತಿಸಲಾಗಿದೆ. ಹಲವು ವರ್ಷಗಳಿಂದ ಬೆಂಗಳೂರಿನ ಮಾರತಹಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ರವಿ ಕುಮಾರ್ ಷೇರು ಮಾರುಕಟ್ಟೆಯಲ್ಲಿ ಅನುಭವಿಸಿದ ನಷ್ಟದಿಂದಾಗಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದರು ಎನ್ನಲಾಗಿದೆ.
ಷೇರು ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸಿದ್ದ ಯುವಕ ಸುಮಾರು 2 ಲಕ್ಷ ರೂ.ಯಷ್ಟು ಸಾಲ ಮಾಡಿಕೊಂಡಿದ್ದ ಎಂಬುದು ಪೊಲೀಸ್ ವಿಚಾರಣೆಯ ವೇಳೆ ಆತ ಮಾಹಿತಿ ನೀಡಿದ್ದಾನೆನ್ನಲಾಗಿದೆ.
ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದಿದ್ದ ಈತ ದೇವರ ದರ್ಶನ ಮುಗಿಸಿ ಕಡಬ-ಪಂಜ ರಸ್ತೆಯ ಪುಳಿಕುಕ್ಕು ಎಂಬಲ್ಲಿಗೆ ಬಂದು, ಬ್ಯಾಗನ್ನು ಬಸ್ಸು ನಿಲ್ದಾಣದಲ್ಲೇ ಇರಿಸಿ ತನ್ನ ಕೈಯನ್ನು ಕೊಯ್ದುಕೊಂಡು ನದಿಗೆ ಹಾರಿದ್ದಾನೆ. ಮುಂಜಾನೆ 5 ಗಂಟೆ ವೇಳೆಗೆ ನದಿಗೆ ಹಾರಿದ್ದ ಎನ್ನಲಾಗಿದೆ.
ಧಾರಾಕಾರವಾಗಿ ಸುಳಿಯುತ್ತಿರುವುದರಿಂದ ಕುಮಾರಧಾರ ನದಿ ಉಕ್ಕಿ ಹರಿಯುತ್ತಿದ್ದರೂ, ಆತ್ಮಹತ್ಯೆಗೆಂದು ಹಾರಿದ ಯುವಕ ಅದೃಷ್ಟವಶಾತ್ ಪೊದೆಯೊಂದರಲ್ಲಿ ಸಿಲುಕಿ ಬದುಕುಳಿದಿದ್ದಾನೆ. ಬೆಳಿಗ್ಗೆಯಾಗುತ್ತಿದ್ದಂತೆ ರಕ್ಷಣೆಗಾಗಿ ಕೂಗಿದ್ದಾನೆ. ದಾರಿಹೋಕರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಪೊಲೀಸರು, ಅಗ್ನಿಶಾಮಕ ದಳ, ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ಆಗಮಿಸಿ ಯುವಕನನ್ನು ರಕ್ಷಿಸಿದ್ದಾರೆ.
ಆತನ ಕೈಯಲ್ಲಿದ್ದ ಮೊಬೈಲ್ ಫೋನ್ ನದಿಯಲ್ಲಿ ಕೊಚ್ಚಿಕೊಂಡು ಹೋಗಿದೆ. ಪ್ಯಾಂಟಿನಲ್ಲಿದ್ದ 10,000 ರೂ. ಸಿಕ್ಕಿದೆ. ಕೈಗೆ ಗಂಭೀರ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಕಡಬ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.