ಭೋಪಾಲ್: ತಮ್ಮ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಆಕ್ಷೇಪಿಸಿದ ಇಬ್ಬರು ಮಹಿಳೆಯರನ್ನು ಗೂಂಡಾಗಳು ಜೀವಂತವಾಗಿ ಸಮಾಧಿ ಮಾಡಲು ಮುಂದಾದ ಅಮಾನವೀಯ ಘಟನೆ ನಡೆದಿದೆ. ಮಧ್ಯಪ್ರದೇಶದ ರೇವಾ ಜಿಲ್ಲೆಯ ಹಿನೌಟಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಹಿನೌಟಾ ಗ್ರಾಮದ ನಿವಾಸಿಗಳಾದ ಮಮತಾ ಪಾಂಡೆ ಮತ್ತು ಆಶಾ ಪಾಂಡೆ ಎಂಬ ಇಬ್ಬರನ್ನು ಜೀವಂತ ಸಮಾಧಿ ಮಾಡಲು ದುಷ್ಕರ್ಮಿಗಳ ಗುಂಪೊಂದು ಯತ್ನಿಸಿತ್ತು. ಜೀವಂತ ಸಮಾಧಿಗೆ ಯತ್ನಿಸಿದ್ದ ಇಬ್ಬರು ಮಹಿಳೆಯರಲ್ಲಿ ಒಬ್ಬ ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ರಸ್ತೆ ಕಾಮಗಾರಿ ಕೆಲಸ ನಡೆಯುತ್ತಿದ್ದು, ಇದು ಮಹಿಳೆಯರ ಜಮೀನಿನಲ್ಲಿ ಹಾದು ಹೋಗುತ್ತದೆ. ತಮ್ಮ ಜಮೀನಿಗೆ ಮಣ್ಣು ಹಾಕದಂತೆ ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲೇ ಇದ್ದ ಪ್ರಭಾವಿಗಳು ಅವರನ್ನು ಅಲ್ಲಿಂದ ಕಳುಹಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೆ ಇದ್ಯಾವುದಕ್ಕೂ ಬಗ್ಗದ ಮಹಿಳೆಯರ ಮೇಲೆ ಮಣ್ಣು ಸುರಿಯುವಂತೆ ಲಾರಿ ಡ್ರೈವರ್ಗೆ ದುಷ್ಕರ್ಮಿಗಳು ಹೇಳಿದ್ದಾರೆ. ಅವರ ಸೂಚನೆಯ ಮೇರೆಗೆ ಲಾರಿ ಚಾಲಕ ಜಲ್ಲಿಕಲ್ಲು ಮಿಶ್ರಿತ ಮಣ್ಣನ್ನು ಮಹಿಳೆಯರ ಮೇಲೆ ಸುರಿದು ಜೀವಂತ ಸಮಾಧಿ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ವಿಷಯ ತಿಳಿದ ಗ್ರಾಮಸ್ಥರು ಓಡಿ ಬಂದು ಮಹಿಳೆಯರನ್ನು ರಕ್ಷಿಸಿದ್ದಾರೆ. ಬಳಿಕ ಸ್ಥಳೀಯರು ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮಂಗಾವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ…