ಎಂ.ಪಿ.ಎಂ. ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ಕಳ ಸಮಾಜಮುಖಿ ಚಿಂತನೆ ಮತ್ತು ಒಳಗೊಳ್ಳುವಿಕೆ ಯಕ್ಷಗಾನದಲ್ಲಿ ಅಗತ್ಯವಿದೆ.
“ ಯಕ್ಷಗಾನವೆಂಬುದು ಒಂದು ದೇವರಕಲೆ, ತಳಮಟ್ಟದಿಂದ ದೃಢವಾದ ಅಭ್ಯಾಸಮಾಡಿ ರಂಗಸ್ಥಳದಲ್ಲಿ ಸರ್ವಾಂಗೀಣ ಪ್ರದರ್ಶನವಿಡುವುದು ಒಬ್ಬ ಕಲಾವಿದನಾಗುವ ವಿದ್ಯಾರ್ಥಿಯ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ” ಎಂದು ಖ್ಯಾತ ಯಕ್ಷಗಾನ ಹಿಮ್ಮೇಳ ಕಲಾವಿದ ಹಾಗೂ ಬೈಲೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸೀತಾರಾಮ ಭಟ್ ಹೇಳಿದರು. ಅವರು ಸ್ಥಳೀಯ ಎಂ.ಪಿ.ಎಂ. ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸಕ್ತ ವರ್ಷದ ಯಕ್ಷಗಾನ ಹಾಗೂ ಲಲಿತಕಲಾ ಸಂಘದ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡುತ್ತಾ “ಹೊರರಾಜ್ಯಗಳಲ್ಲಿ ವೃತ್ತಿನಿರತರಾಗಿ ದುಡಿಯುವ ಸಂದರ್ಭ ಬಂದಲ್ಲಿ, ಅಲ್ಲಿಯ ಜನರಿಗೆ ಲಲಿತಕಲೆ ಮತ್ತು ಯಕ್ಷಗಾನದ ತರಬೇತಿ ನೀಡಿ ಅವರನ್ನು ಕೂಡಿಕೊಂಡು ಪ್ರದರ್ಶನಗಳನ್ನ ನೀಡಿದಲ್ಲಿ, ಕಲೆಗಳ ಪ್ರಸರಣ ವೃದ್ಧಿಗೊಳ್ಳುವುದು “ ಎಂದರು. ಯಕ್ಷಗಾನ ತರಬೇತಿ ಗುರುಗಳಾದ ಶ್ರೀ ಮಹಾವೀರ ಪಾಂಡಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ಥಳೀಯ ಯಕ್ಷಗಾನ, ವಿದೇಶಗಳಲ್ಲೂ ಹೆಸರುವಾಸಿಯಾಗಿದ್ದು, ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಕಾಲೇಜಿನಲ್ಲಿ ಲಭ್ಯವಿರುವ ಲಲಿತಕಲೆ, ರಂಗಭೂಮಿ ಹಾಗೂ ಯಕ್ಷಗಾನ ತರಬೇತಿಗಲಳ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಸಭಾದ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಕಿರಣ್ ಎಂ. ರವರು , ಕಲಿಕೆ ಹಾಗೂ ಕಲಾ ಪ್ರದರ್ಶನಗಳಲ್ಲಿ ಇಂದು ಸಮಾಜದ ಎಲ್ಲಾ ವರ್ಗದವರೂ ಭಾಗವಹಿಸುತ್ತಿರುವುದು ಪ್ರಶಂಸನೀಯವೆಂದರು. ಇದೇ ಸಂದರ್ಭದಲ್ಲಿ ಯಕ್ಷಕಲಾ ರಂಗ(ರಿ.) ಕಾರ್ಕಳ ಮತ್ತು ಕಾಲೇಜಿನ ನಡುವೆ ಯಕ್ಷಗಾನ ಸರ್ಟಿಫಿಕೇಟ್ ಕೋರ್ಸು ನಡೆಸುವ ಬಗ್ಗೆ ಒಡಂಬಡಿಕೆಯನ್ನು ಮುಂದಿನ ಐದು ವರ್ಷಗಳಿಗೆ ವಿಸ್ತರಿಸಲಾಯಿತು. ಕಳೆದ ಸಾಲಿನಲ್ಲಿ ಯಕಗಾನ ತರಬೇತಿಯನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳು ಪ್ರಮಾಣಪತ್ರವನ್ನು ನೀಡಿದರು. ವೇದಿಕೆಯಲ್ಲಿ ಕಾಲೇಜಿನ ಐ.ಕ್ಯು.ಎಸಿ ಸಂಚಾಲಕರಾದ ಸುಷ್ಮಾ ರಾವ್ ಉಪಸ್ಥಿತರಿದ್ದರು. ಪ್ರಾಧ್ಯಾಪಕರಾದ ಡಾ. ವಿದ್ಯಾಧರ ಹೆಗ್ಡೆ ಎಸ್, ಡಾ. ಜಯಭಾರತಿ, ಡಾ. ಸುದರ್ಶನ ಬಿ, ಪ್ರಸನ್ನ ಕುಮಾರ್ ಮಂಜುನಾಥ ಬಿ ಹಾಗೂ ಗ್ರಂಥಪಾಲಕರಾದ ವೆಂಕಟೇಶ್, ಬೊಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಲಲಿತಕಲಾ ಸಂಘದ ಸಂಚಾಲಕರಾದ ಮೈತ್ರಿ ಬಿ ಅತಿಥಿಗಳನ್ನು ಸ್ವಾಗತಿಸಿದರು. ಯಕ್ಷಗಾನ ಸಂಘದ ಸಂಚಾಲಕರಾದ ಡಾ. ಗಣೇಶ್ ವಂದಿಸಿದರು. ವಿದ್ಯಾರ್ಥಿನಿ ಸೌಜನ್ಯ ಭಾಗವತಿಕೆಯಲ್ಲಿ, ಸಂದೇಶ್ ಭಟ್ ಹಾಗೂ ಗಣೇಶ್ ಚೆಂq ಹಾಗೂ ಮದ್ದಳೆಯಲ್ಲಿ ಸಹಕರಿಸಿದರು. ಕುಮಾರಿ ಸ್ನೇಹಾ ಕಾರ್ಯಕ್ರಮ ನಿರೂಪಿಸಿದರು.