ಬೆಂಗಳೂರು: ಮಚ್ಚಿನಿಂದ ತಲೆಗೆ ಹೊಡೆದು ವ್ಯಕ್ತಿಯನ್ನು ಹತ್ಯೆಗೈದಿರುವ ಘಟನೆ ನಗರದ ಬೇಗೂರಿನ ಮಾಂಸದ ಅಂಗಡಿಯೊಂದರಲ್ಲಿ ನಡೆದಿದೆ.
ಅಫ್ಸರ್ (45) ಕೊಲೆಯಾದ ವ್ಯಕ್ತಿ. ಅಫ್ಸರ್ ಬೆಂಗಳೂರಿನ ಶಿವಾಜಿನಗರ ನಿವಾಸಿಯಾಗಿದ್ದ. ಕಳೆದ 8 ತಿಂಗಳ ಹಿಂದೆ ಅಕ್ಬರ್ ಹಾಗೂ ಅಫ್ಸರ್ ಅಂಗಡಿ ಶುರು ಮಾಡಿದ್ದರು. ಆದರೆ ಅಂಗಡಿಯಲ್ಲಿ ವ್ಯಾಪಾರ ಸರಿಯಾಗಿ ಆಗುತ್ತಿರಲಿಲ್ಲ. ಇದರಿಂದ ಪ್ರತ್ಯೇಕ ಅಂಗಡಿ ತೆರೆಯಲು ಅಕ್ಬರ್ ನಿರ್ಧರಿಸಿದ್ದ. ಬಂಡವಾಳದ ಹಣ ವಾಪಸ್ ನೀಡುವಂತೆ ಅಫ್ಸರ್ನನ್ನು ಕೇಳಿದ್ದ. ಅಫ್ಸರ್ ಸುಮಾರು 3 ಲಕ್ಷ ರೂ. ವಾಪಸ್ ನೀಡಿದ್ದ. ಆದರೆ ಬಾಕಿ 20 ಸಾವಿರ ರೂ. ಕೊಡುವಂತೆ ಅಕ್ಬರ್ ಒತ್ತಾಯಿಸಿದ್ದ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ.
ಗಲಾಟೆ ವೇಳೆ ಇಬ್ಬರ ನಡುವೆ ತಳ್ಳಾಟ, ನೂಕಾಟ ನಡೆದಿದೆ. ಈ ವೇಳೆ ಅಕ್ಬರ್ ಅಂಗಡಿಯಲ್ಲಿದ್ದ ಮಚ್ಚಿನಿಂದಲೇ ಅಫ್ಸರ್ ತಲೆಗೆ ಹೊಡೆದಿದ್ದ. ಇದರಿಂದ ತೀವ್ರ ರಕ್ತಸ್ರಾವವಾಗಿ ಅಫ್ಸರ್ ಅಂಗಡಿಯಲ್ಲೇ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಬೇಗೂರು ಪೊಲೀಸರು, ಸೋಕೋ ಟೀಂ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿ ಅಕ್ಬರ್ನನ್ನು ಬಂಧಿಸಿ, ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.