ಮಂಗಳೂರು: ಒಳಚರಂಡಿ ಕಾಮಗಾರಿ ವೇಳೆ ಮಣ್ಣಿನ ರಾಶಿ ಕುಸಿದು ಕೂಲಿ ಕಾರ್ಮಿಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಗರದ ಹೊಗೆಬೈಲ್ನಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಕಮಲ್ ಹುಸೇನ್ (20) ಮೃತ ಕೂಲಿಕಾರ್ಮಿಕ ಎಂದು ಗುರುತಿಸಲಾಗಿದೆ. ಎಂಟು ಅಡಿ ಆಳದಲ್ಲಿ ಮೂವರು ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ, ಸುತ್ತಮುತ್ತಲಿನ ಕೆಸರು ಒಳಕ್ಕೆ ನುಗ್ಗಿ, ಮೂವರು ಕಾರ್ಮಿಕರು ಸಿಲುಕಿಕೊಂಡಿದ್ದರು.
ಸ್ಥಳೀಯ ನಿವಾಸಿಗಳು ಇಬ್ಬರು ಕಾರ್ಮಿಕರನ್ನು ಅವಶೇಷಗಳಿಂದ ರಕ್ಷಿಸುವಲ್ಲಿ ಯಶಸ್ವಿಯಾದರು. ಆದರೆ ಕಮಲ್ ಹುಸೇನ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದರು. ಈ ಘಟನೆ ಸಂಬಂಧ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.