ಮಂಗಳೂರು: ಎಳನೀರು ಕುಡಿದ ಸುಮಾರು 15 ಮಂದಿ ಏಕಾಏಕಿ ಅಸ್ವಸ್ಥಗೊಂಡ ಘಟನೆಯೊಂದು ಮಂಗಳೂರು ನಗರ ಹೊರವಲಯದ ಅಡ್ಯಾರ್ ಬಳಿ ನಡೆದಿದೆ.
ಅಡ್ಯಾರ್ನಲ್ಲಿರುವ ಎಳನೀರು ಮತ್ತು ಐಸ್ಕ್ರೀಮ್ ಮಾರಾಟ ಸಂಸ್ಥೆಯಿಂದ ಒಂದಷ್ಟು ಮಂದಿ ಎಳನೀರು ಖರೀದಿ ಮಾಡಿದ್ದು, ಇದನ್ನು ಕುಡಿದ ಬಳಿಕ ಅಡ್ಯಾರ್ ಕಣ್ಣೂರು ಮತ್ತು ತುಂಬೆ ಪರಿಸರದ ನಿವಾಸಿಗಳು ಏಕಾಏಕಿ ವಾಂತಿ ಮತ್ತು ಭೇದಿಯ ಸಮಸ್ಯೆಗೆ ಒಳಗಾಗಿರುವ ಕುರಿತು ವರದಿಯಾಗಿದೆ.
ಅಸ್ವಸ್ಥಗೊಂಡವರಲ್ಲಿ ಮೂವರನ್ನು ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದ 12 ಮಂದಿ ಹೊರರೋಗಿಗಳಾಗಿ ಔಷಧಿ ಪಡೆದಿದ್ದಾರೆ. ಇದೀಗ ಆಸ್ಪತ್ರೆಗೆ ಹಾಗೂ ಫ್ಯಾಕ್ಟರಿಗೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ಮಾಡಿದ್ದಾರೆ. ಎಳನೀರಿನ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಲಾಗಿದೆ. ಆರೋಗ್ಯಾಧಿಕಾರಿಗಳು ಜನರು ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ.
ಕಾಲರಾ ಭೀತಿ ಹರಡುತ್ತಿದೆ ಎಂಬ ತಪ್ಪು ಮಾಹಿತಿ ಮಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಹರಡಲಾಗುತ್ತಿದ್ದು, ಇಂತಹ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಎಳನೀರು ಫ್ಯಾಕ್ಟರಿಯ ಐಸ್ಕ್ರೀಮ ಮತ್ತು ಎಳನೀರು ಕುಡಿದ ನಂತರ ಜನರಲ್ಲಿ ವಾಂತಿ ಭೇದಿ ಕಂಡು ಬಂದಿದ್ದು, ಸೋಮವಾರದಂದು ಫ್ಯಾಕ್ಟರಿಯ ಎಳನೀರು ಸೇವಿಸಿದ ನಂತರ ಆರೋಗ್ಯದಲ್ಲಿ ಏರುಪಾರಾಗಿರುವ ಕುರಿತು ನಿವಾಸಿಗಳ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಹಾಗೂ ಆಹಾರ ಸುರಕ್ಷತಾ ಅಧಿಕಾರಿಯವರು ಫ್ಯಾಕ್ಟರಿಗೆ ಬಂದು ಎಳನೀರು ಸ್ಯಾಂಪಲ್ ಸಂಗ್ರಹಿಸಿದ್ದಾರೆ. ಇಡೀ ಫ್ಯಾಕ್ಟರಿ ಬಂದ್ ಮಾಡಿ ಶುಚಿಗೊಳಿಸಲಾಗಿದೆ.