ಮಂಗಳೂರು: ಮಂಗಳೂರು-ಸುಬ್ರಹ್ಮಣ್ಯ ನಡುವೆ ಪ್ಯಾಸೆಂಜರ್ ರೈಲು ಆರಂಭಿಸಬೇಕು ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ಆಗ್ರಹಿಸಿದ್ದಾರೆ. ಮಂಗಳೂರು-ಸುಬ್ರಹ್ಮಣ್ಯ ನಡುವೆ ಮೀಟರ್ಗೇಜ್ ಹಳಿ ಇದ್ದಾಗ ಪ್ಯಾಸೆಂಜರ್ ರೈಲು ಓಡಾಟವಿತ್ತು. ಬ್ರಾಡ್ಗೇಜ್ ಹಳಿ ಮಾಡುವಾಗ 2005ರಲ್ಲಿ ಈ ಸಂಚಾರ ನಿಲ್ಲಿಸಲಾಗಿತ್ತು.ಬ್ರಾಡ್ಗೇಜ್ ಹಳಿಯಾಗಿ ಪರಿವರ್ತನೆಯಾದ ಬಳಿಕ, ಪ್ಯಾಸೆಂಜರ್ ರೈಲು ಮಂಗಳೂರು ಕಬಕ ಪುತ್ತೂರು ನಡುವೆ ಮಾತ್ರ ಓಡಾಟ ನಡೆಸುತ್ತಿದೆ. ಅದನ್ನು ಸುಬ್ರಹ್ಮಣ್ಯ ವರೆಗೆ ವಿಸ್ತರಿಸಬೇಕು ಎಂದು ಅವರು ಕೋರಿದರು.
ಇದಕ್ಕುತ್ತರಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಸೇನೆಯಿಂದ ನಿವೃತ್ತಿ ಹೊಂದಿ ಸಂಸದರಾಗಿರುವ ಕ್ಯಾ. ಬ್ರಿಜೇಶ್ ಚೌಟ ಬಗ್ಗೆ ಗೌರವವಿದ್ದು, ರೈಲ್ವೆ ವಿಚಾರಗಳ ಬಗ್ಗೆ ಯಾವುದೇ ಮನವಿಯಿದ್ದರೂ ನನ್ನ ಕಚೇರಿಗೆ ಬಂದು ವೈಯಕ್ತಿಕವಾಗಿ ಚರ್ಚಿಸಬಹುದು. ಪರಿಹರಿಸಲು ಮುಕ್ತನಾಗಿದ್ದೇನೆ ಎಂದು ಹೇಳಿದ್ದಾರೆ.