ವಿಜಯಪುರ: ಇಸ್ಪೀಡ್ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದಾಗ ತಪ್ಪಿಸಿಕೊಳ್ಳಲೆಂದು ತೆಪ್ಪಹತ್ತಿ ಪರಾರಿಯಾಗಲೆತ್ನಿಸಿದ ಕೆಲವರು ತೆಪ್ಪ ಮಗುಚಿ ನೀರು ಪಾಲಾದ ಘಟನೆ ನಡೆದಿದೆ. ನೀರು ಪಾಲಾದವರಲ್ಲಿ ಮೂವರ ಶವ ಪತ್ತೆಯಾಗಿದ್ದು, ಇನ್ನುಳಿದವರಿಗಾಗಿ ಹುಡುಕಾಟ ನಡೆದಿದೆ. ವಿಜಯಪುರ ಜಿಲ್ಲೆಯ ಕೊಲ್ಹಾರದ ಬಳೂತಿ ಜಾಕ್ವೆಲ್ ಬಳಿ ಈ ಘಟನೆ ನಡೆದಿದೆ.
ಪುಂಡಲೀಕ ಯಕಂಚಿ, ತಯ್ಯಬ್ ಚೌಧರಿ, ದಶರಥ ಗೌಡರ ಎಂಬವರ ಶವ ಪತ್ತೆಯಾಗಿದೆ. ಮಂಗಳವಾರ ಸಂಜೆ ಹಲವರು ಕೃಷ್ಣಾ ನದಿ ತೀರದ ಜಾಕ್ವೆಲ್ ಬಳಿ ಇಸ್ಪೀಟ್ ಆಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದರು. ಕೆಲವರು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಇನ್ನು ಕೆಲವರು ತೆಪ್ಪ ಏರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಭಾರ ಹೆಚ್ಚಾಗಿ ತೆಪ್ಪ ಮಗುಚಿಬಿದ್ದಿದೆ. ಇಬ್ಬರು ಈಜಿ ದಡ ಸೇರಿದ್ದಾರೆ. ಆರು ಮಂದಿ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದವರಿಗಾಗಿ ನಿನ್ನೆಯೇ ಪತ್ತೆ ಕಾರ್ಯಾಚರಣೆ ನಡೆಸಲಾಗಿದೆ. ಆದರೆ ರಾತ್ರಿಯಾದುದರಿಂದ ಕಾರ್ಯಾಚರಣೆ ನಿಲ್ಲಿಸಲಾಗಿತ್ತು. ಇಂದು ಬೆಳಗ್ಗಿನಿಂದ ಮತ್ತೆ ಕಾರ್ಯಾಚರಣೆ ಆರಂಭವಾಗಿದೆ.