Saturday, May 24, 2025
Homeರಾಜ್ಯಭಕ್ತರ ಸೋಗಿನಲ್ಲಿ ಮಠಕ್ಕೆ ಬಂದು 40 ಲಕ್ಷ ರೂ. ಮೌಲ್ಯದ ನಗದು, ಆಭರಣ ದರೋಡೆ

ಭಕ್ತರ ಸೋಗಿನಲ್ಲಿ ಮಠಕ್ಕೆ ಬಂದು 40 ಲಕ್ಷ ರೂ. ಮೌಲ್ಯದ ನಗದು, ಆಭರಣ ದರೋಡೆ

ಲಿಂಗಸುಗೂರು: ಭಕ್ತರ ಸೋಗಿನಲ್ಲಿ ಮಠಕ್ಕೆ ಬಂದ ಅಪರಿಚಿತರಿದ್ದರು ಮಠದಿಂದ ಸುಮಾರು 40 ಲಕ್ಷ ರೂ. ಮೌಲ್ಯದ ನಗ, ನಗದು ಲೂಟಿ ಮಾಡಿ ಪರಾರಿಯಾಗಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಇಳಕಲ್ಲ ವಿಜಯ ಮಹಾಂತೇಶ್ವರ ಮಠದಲ್ಲಿ ಈ ಘಟನೆ ನಡೆದಿದೆ.
ಗುರುವಾರ ಮಧ್ಯರಾತ್ರಿ ಮಠಕ್ಕೆ ಬಂದಿದ್ದ ಇಬ್ಬರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ಪಿಸ್ತೂಲ್‌ ಹಿಡಿದು ಜೀವಬೆದರಿಕೆ ಹಾಕುವ ಮೂಲಕ ಕಪಾಟು, ಟ್ರಂಕ್‌ಗಳಲ್ಲಿದ್ದ 7 ತೊಲ ಚಿನ್ನ, 10 ಕೆ.ಜಿ. ಬೆಳ್ಳಿ, ಅಂದಾಜು 20 ಲಕ್ಷ ರೂ. ನಗದು ದೋಚಿಕೊಂಡು ಹೋಗಿದ್ದಾರೆ.
ಪಾದ ಮತ್ತು ಇಷ್ಟಲಿಂಗ ಪೂಜೆಗೆ ಬಳಸುವ ಬೆಳ್ಳಿ ಸಾಮಗ್ರಿಗಳು, ಚಿನ್ನದ ಕರಡಿಗೆ ಮತ್ತು ಸುತ್ತುಂಗುರಗಳನ್ನು ದರೋಡೆ ಮಾಡಲಾಗಿದೆ. ಈ ಬಗ್ಗೆ ಶಾಖಾ ಮಠದ ಸಿದ್ಧಲಿಂಗ ಸ್ವಾಮೀಜಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸ್‌ ಇನ್ಸ್‌ಪೆಕ್ಟರ್‌ ಪುಂಡಲೀಕ್‌ ಪಟತ್ತರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ ಬಾಬು, ಡಿವೈಎಸ್‌ಪಿ ದತ್ತಾತ್ರೇಯ ಕಾರ್ನಾಡ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

RELATED ARTICLES
- Advertisment -
Google search engine

Most Popular