ಬೆಳ್ತಂಗಡಿ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಆರೋಪಿ ಶಶಿರಾಜ್ ಶೆಟ್ಟಿಗೆ 25 ದಿನಗಳ ಬಳಿಕ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅದರಂತೆ ನಾಪತ್ತೆಯಾಗಿದ್ದ ಮತ್ತೊಬ್ಬ ಆರೋಪಿ ಪ್ರಮೋದ್ ದಿಡುಪೆಗೂ ಷರತ್ತು ಬದ್ಧ ಜಾಮೀನು ಮಂಜೂರಾಗಿದೆ. ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಮೇ 18 ರಂದು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಪ್ರಕರಣ ದಾಖಲಿಸಿದ್ದರು.
ಬಳಿಕ ಪ್ರಕರಣದ ಆರೋಪಿಯಾದ ಶಶಿರಾಜ್ ಶೆಟ್ಟಿಯನ್ನು ಮೇ 18 ರಂದು ರಾತ್ರಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು. ಬಂಧನವಾಗಿ 25 ದಿನಗಳ ಬಳಿಕ ಶಶಿರಾಜ್ ಶೆಟ್ಟಿಗೆ ಮಂಗಳೂರು ಸೆಷನ್ಸ್ ಕೋರ್ಟ್ನಿಂದ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಮಾಡಿದ್ದಾರೆ.
ಶಶಿರಾಜ್ ಶೆಟ್ಟಿ ಪರ ನ್ಯಾಯವಾದಿ ಮಹೇಶ್ ಕಜೆ ಕೋರ್ಟ್ ನಲ್ಲಿ ವಾದಿಸಿದರು. ಅಕ್ರಮ ಗಣಿಗಾರಿಕೆ ಪ್ರಕರಣದ ಪ್ರಮುಖ ಆರೋಪಿ ಪ್ರಮೋದ್ ದಿಡುಪೆ ಪ್ರಕರಣದ ಬಳಿಕ ಪರಾರಿಯಾಗಿದ್ದು ಆತನಿಗೂ ಷರತ್ತು ಬದ್ಧ ಜಾಮೀನು ಮಂಜೂರಾಗಿದೆ. ಪ್ರಮೋದ್ ದಿಡುಪೆ ಪರ ವಕೀಲರಾದ ಶಂಭು ಶರ್ಮ ಮತ್ತು ಅಜಯ್ ಸುವರ್ಣ ವಾದಿಸಿದರು.