ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಕಂದಾಯ ಅಧಿಕಾರಿಯೋರ್ವರೇ ದಾಳಿ ನಡೆಸಿ ಟಿಪ್ಪರ್ ಮತ್ತು ಕಬ್ಬಿಣದ ಬೋಟನ್ನು ವಶಪಡಿಸಿಕೊಂಡ ಘಟನೆ ಶನಿವಾರ ಮುಜಾನೆ ಕಡಂದಲೆಯಲ್ಲಿ ನಡೆದಿದೆ.
ಕಡಂದಲೆ ಗ್ರಾಮದ ತುಳುಮುಗೇರ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆಯ ಬಗ್ಗೆ ಕಳೆದ ಕೆಲವು ದಿನಗಳಿಂದ ಸಾರ್ವಜನಿಕರಿಂದ ದೂರುಗಳು ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿ ಮಂಜು ನಾಥ್ ಅವರು ಎರಡು ಬಾರಿ ಸ್ಥಳಕ್ಕೆ ತೆರಳಿದ್ದಾಗ ಮಾಹಿತಿ ಸೋರಿಕೆಯಿಂದಾಗಿ ಆರೋಪಿಗಳು ತಪ್ಪಿಸಿಕೊಂಡಿದ್ದು ಸ್ಥಳದಲ್ಲಿ ಯಾವುದೇ ಸ್ವತ್ತುಗಳು ಇರಲಿಲ್ಲ ಎನ್ನಲಾಗಿದೆ. ಶನಿವಾರ ಸರಕಾರಿ ರಜೆಯಾಗಿದ್ದರೂ ಕಂದಾಯ ಅಧಿಕಾರಿ ಬೆಳಿಗ್ಗೆ 5 ಗಂಟೆಗೆ ಒಬ್ಬರೆ ಕಾರಿನಲ್ಲಿ ಸ್ಥಳಕ್ಕೆ ತೆರಳಿ ಕಾದು ಕುಳಿತಿದ್ದರೆನ್ನಲಾಗಿದೆ.
ಸ್ವಲ್ಪ ಹೊತ್ತಿನಲ್ಲಿ ಅಕ್ರಮ ಮರಳುಗಾರಿಕೆ ಪ್ರಾರಂಭವಾದಾಗ ಟಿಪ್ಪರ್ ಸಂಚರಿಸುವ ರಸ್ತೆಗೆ ಅಧಿಕಾರಿ ತನ್ನ ಕಾರನ್ನು ಅಡ್ಡ ಇಟ್ಟು ಮರಳುಗಾರಿಕೆ ಸ್ಥಳಕ್ಕೆ ದಾಳಿ ನಡೆಸಿ ಅಲ್ಲಿದ್ದ ಟಿಪ್ಪರ್ಗಳು ಮತ್ತು ಇತರ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಬ್ಬಿಣದ ಬೋಟನ್ನು ದಾಖಲೆ ಪ್ರಕಾರ ವಶಕ್ಕೆ ಪಡೆದಿದ್ದರೂ ಎತ್ತಲು ಸಾಧ್ಯವಾಗದೆ ಸ್ಥಳದಲ್ಲೆ ಬಿಡಲಾಗಿದೆ. ಟಿಪ್ಪರ್ಗಳನ್ನು ಮೂಡುಬಿದಿರೆ ಪೊಲೀಸರಿಗೆ ಹಸ್ತಾಂತರಿಸಿ ಅದರ ಮಾಲಕರ ವಿರುದ್ಧ ಕ್ರಮಕ್ಕೆ ಪತ್ರ ಬರೆಯಲಾಗಿದೆ. ಅಕ್ರಮ ಮರಳುಗಾರಿಕೆ ವಿರುದ್ಧ ಗಣಿ ಇಲಾಖಾಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.