ಬಂಟ್ವಾಳ: ಇಲ್ಲಿನ ಮಣಿನಾಲ್ಕೂರು ಗ್ರಾಮದಲ್ಲಿ ಸುಮಾರು 500 ವರ್ಷಗಳ ಹಿನ್ನೆಲೆ ಹೊಂದಿರುವ ಕಾರಣಿಕ ಪ್ರಸಿದ್ಧ ಮುಲ್ಕಾಜೆಮಾಡ ಶ್ರೀ ಉಳ್ಳಾಲ್ದಿ ಉಳ್ಳಾಕ್ಲು ಕೊಡಮಣಿತ್ತಾಯ ಹಾಗೂ ಪರಿವಾರ ದೈವಸ್ಥಾನ ರೂ 3.50 ಕೋಟಿ ವೆಚ್ಚದಲ್ಲಿ ಸಂಪೂರ್ಣ ಪುನರ್ ನವೀಕರಣಗೊಂಡು ಮಾ.28ರಿಂದ ಏ.1ರತನಕ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಇಲ್ಲಿನ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆಮಾಡ ಶ್ರೀ ಉಳ್ಳಾಲ್ದಿ ಉಳ್ಳಾಕ್ಲು ಕೊಡಮಣಿತ್ತಾಯ ಹಾಗೂ ಪರಿವಾರ ದೈವಸ್ಥಾನದಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ” ಇಲ್ಲಿನ ಸುಮಾರು 3 ಎಕರೆ ಜಮೀನಿನಲ್ಲಿ ಪಾಳು ಬಿದ್ದ ಸ್ಥಿತಿಯಲ್ಲಿದ್ದ ದೈವಸ್ಥಾನವು ಸ್ಥಳೀಯ ಐದು ಗ್ರಾಮಗಳ ಭಕ್ತರ ಸಹಕಾರದಲ್ಲಿ ಸಂಪೂರ್ಣ ಪುನರ್ ನವೀಕರಣಗೊಂಡು ಭಕ್ತರಿಗೆ ದೈವಗಳ ಪುನರ್ ಪ್ರತಿಷ್ಠೆ ಸಹಿತ ನೇಮೋತ್ಸವ ನೋಡುವ ಅವಕಾಶ ಸಿಕ್ಕಿದೆ’ ಎಂದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ ಜೈನ್ ಮಾತನಾಡಿ, ‘ಇಲ್ಲಿನ ಮಣಿನಾಲ್ಕೂರು, ದೇವಸ್ಯಮೂಡೂರು, ದೇವಸ್ಯಪಡೂರು, ಕಾವಳಮೂಡೂರು, ಕಾವಳಪಡೂರು ಗ್ರಾಮಗಳ ನೂರಾರು ಮಂದಿ ಭಕ್ತರು ಪ್ರತಿದಿನ ಸಂಜೆ ಶ್ರಮದಾನ ನಡೆಸುತ್ತಿದ್ದಾರೆ’ ಎಂದರು.

ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ದಯಾನಂದ ಶೆಟ್ಟಿ ಅಮೈ ಮಾತನಾಡಿ, ‘ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಮತ್ತು ಮಾಗಣೆ ತಂತ್ರಿ ಗಣಪತಿ ಮುಚ್ಚಿನ್ನಾಯರ ಮಾರ್ಗದರ್ಶನದಲ್ಲಿ ಇದೇ 28ರಿಂದ 30ರತನಕ ವಿವಿಧ ವೈದಿಕ ವಿಧಿ ವಿಧಾನಗಳೊಂದಿಗೆ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಡೆಯಲಿದ್ದು, ಮಾ.30 ರಿಂದ ಏ.1ರತನಕ ದೈವಗಳ ನೇಮೋತ್ಸವ ನಡೆಯಲಿದೆ’ ಎಂದರು.
ಇದೇ 28 ಮತ್ತು 29ರಂದು ಸಂಜೆ 7 ಗಂಟೆಗೆ ಧಾರ್ಮಿಕ ಸಭೆ ಮತ್ತು ತುಳು ನಾಟಕ ಪ್ರದರ್ಶನ ಸಹಿತ ಪ್ರತಿದಿನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಬೂಡ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ಬಿ.ಸಂಜೀವ ಪೂಜಾರಿ, ಆನಂದ ಆಳ್ವ ಬತ್ತನಾಡಿ, ಮೋನಪ್ಪ ಪೂಜಾರಿ, ನಾರಾಯಣ ಮಯ್ಯ ದೇವಸ್ಯ, ಸದಾಶಿವ ಪೂಜಾರಿ, ಬಾಲಕೃಷ್ಣ ಅಂಚನ್ ಮತ್ತಿತರರು ಇದ್ದರು.