Monday, February 17, 2025
Homeಮುಲ್ಕಿಮುಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯಿತಿಗೆ ಲೋಕಾಯುಕ್ತ ದಿಢೀರ್ ಭೇಟಿ

ಮುಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯಿತಿಗೆ ಲೋಕಾಯುಕ್ತ ದಿಢೀರ್ ಭೇಟಿ

ಮುಲ್ಕಿ: ತಾಲೂಕು ವ್ಯಾಪ್ತಿಯ ಹಳೆಯಂಗಡಿ ಗ್ರಾಮ ಪಂಚಾಯಿತಿಯಲ್ಲಿ ಅಸಮರ್ಪಕ ಕಡತ ವಿಲೇವಾರಿ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಲೋಕಾಯುಕ್ತ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯಿತಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮಂಗಳೂರು ಲೋಕಾಯುಕ್ತ ಡಿವೈಎಸ್ಪಿ ಗಾನ ಪಿ ಕುಮಾರ್ ನೇತೃತ್ವದ ಲೋಕಾಯುಕ್ತ ತಂಡ ಪಂಚಾಯತ್ ನಲ್ಲಿ ವಿಲೇವಾರಿಯಾಗದ ಸುಮಾರು9/11 ಅರ್ಜಿಗಳೇ ಹೆಚ್ಚಾಗಿರುವ 50ಕ್ಕೂ ಹೆಚ್ಚು ಕಡತಗಳನ್ನು ಪರಿಶೀಲಿಸಿ ಪಂಚಾಯತ್ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪಂಚಾಯತ್ ಅಧಿಕಾರಿ ಲೋಕಾಯುಕ್ತ ಅಧಿಕಾರಿಗಳ ಜೊತೆ ಮಾತನಾಡಿ ಗ್ರಾಮ ಪಂಚಾಯಿತಿಯಲ್ಲಿ ಇ ಸ್ವತ್ತು ತಂತ್ರಾಂಶದ ಹೊಸ ಅವತರಣಿಕೆ ಪರಿಚಯಗೊಂಡ ಒಂದು ತಿಂಗಳ ಅಂತರದಲ್ಲಿ9/11 ಅರ್ಜಿ ಸಲ್ಲಿಕೆಗೆ ಬಹುತೇಕ ತೊಡಕುಂಟಾಗುತ್ತಿದ್ದು ಕಡತಗಳು ಬಾಕಿಯಾಗುತ್ತಿದೆ ಎಂದು ಸಮಜಾಯಿಶಿ ನೀಡಿದ್ದಾರೆ.
ಈ ಸಂದರ್ಭ ಲೋಕಾಯುಕ್ತ ಡಿವೈಎಸ್ಪಿ ಗಾನ ಪಿ ಕುಮಾರ್ ಸಾರ್ವಜನಿಕರ ಕಡತಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡುವಂತೆ ಸೂಚನೆ ನೀಡಿದ್ದಾರೆ
ಪಂಚಾಯತ್ ಸದಸ್ಯ ಧನರಾಜ್ ಸಸಿಹಿತ್ಲು ಅಧಿಕಾರಿಗಳ ಜೊತೆ ಮಾತನಾಡಿ ಪಂಚಾಯತ್ ನಲ್ಲಿ ಅಭಿವೃದ್ಧಿ ಅಧಿಕಾರಿ ಸಹಿತ ಸಿಬ್ಬಂದಿಗಳ ಕೊರತೆ ಕಾಣುತ್ತಿದೆ ಹಾಗೂ ಪಂಚಾಯತ್ ವ್ಯಾಪ್ತಿಯ ಸಸಿಹಿತ್ಲು ಎರಡನೇ ವಾರ್ಡ್ ನಲ್ಲಿ ಜಾಗದ ತಕರಾರು ಇದ್ದರೂ ಮನೆ ಕಟ್ಟಲು ಸ್ಥಳೀಯ ಪಂಚಾಯತ್ ಸದಸ್ಯರನ್ನು ನಿರ್ಲಕ್ಷಿಸಿ 9/11 ಪರವಾನಿಗೆ ಕೊಟ್ಟಿದ್ದು ಎಂಟು ಮನೆಗೆ ಹೋಗುವ ರಸ್ತೆ ತಡೆ ಮಾಡಿದ್ದಾರೆ. ಈ ಬಗ್ಗೆ ಪಂಚಾಯಿತಿ ಕಾರ್ಯದರ್ಶಿ, ಪ್ರಶ್ನಿಸಿದರೆ ಸೂಕ್ತ ಉತ್ತರ ದೊರಕಿಲ್ಲ ಎಂದು ಆರೋಪಿಸಿದ್ದಾರೆ.
ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ, ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಅಮಾನುಲ್ಲಾ ಎ, ಸಿಬ್ಬಂದಿ ಸುರೇಂದ್ರ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular