ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ
ಪಿಯುಸಿಯಲ್ಲಿ ಶೇಕಡಾ 98̤.67% ಅಂಕ ಪಡೆದು ಕರ್ನಾಟಕ ರಾಜ್ಯದ 7ನೇ ಸ್ಥಾನ ಪಡೆದ ಪಿ.ನಂದನ್ ಹೆಬ್ಬಾರ್ರವರಿಗೆ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಅವರ ಶೈಕ್ಷಣಿಕ ಕಾಳಜಿ, ಸಾಧನೆಯನ್ನು ಗುರುತಿಸಿ. “ಶಿಕ್ಷಣ ಸಿರಿ” ರಾಜ್ಯ ಪ್ರಶಸ್ತಿ ವಿತರಿಸಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ದಿನಾಂಕ 28-07-2024 ನೇ ಭಾನುವಾರ ದಂದು ದಾವಣಗೆರೆಯ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದ ಬೃಹತ್ ವೇದಿಕೆಯಲ್ಲಿ ಪುಷ್ಪವೃಷ್ಟಿಯೊಂದಿಗೆ, ಮಸ್ತಕದ ಮೇಲೆ ಕಿರೀಟವಿಟ್ಟು, ಚಿನ್ನದ ಲೇಪನದ ಪದಕ, ಅವರದ್ದೇ ಭಾವಚಿತ್ರವಿರುವ ಅವರ ತಂದೆ-ತಾಯಿ ಹೆಸರು, ವ್ಯಾಸಂಗ ಮಾಡಿದ ವಿದ್ಯಾಸಂಸ್ಥೆಯ ಹೆಸರಿನೊಂದಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
ಬಾಲ್ಯದಿಂದಲೇ ಕಠಿಣ ಪರಿಶ್ರಮದಿಂದ ಶೈಕ್ಷಣಿಕ ಕಾಳಜಿಯೊಂದಿಗೆ ಸಾಧನೆ ಮಾಡಿದ ನಂದನ್ರವರಿಗೆ ಕಲಾಕುಂಚ ಅಧ್ಯಕ್ಷರಾದ ಕೆ.ಎಚ್.ಮಂಜುನಾಥ್ ಸೇರಿದಂತೆ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದಿಸಿದ್ದಾರೆ.