ಮುಂಬೈ: ಬಿಜೆಪಿ ನಾಯಕಿ ಪಂಕಜಾ ಮುಂಡೆ ಸೋತರೆ ತಾನು ಬದುಕುವುದಿಲ್ಲ ಎಂದು ಹೇಳಿಕೊಂಡಿದ್ದ ವ್ಯಕ್ತಿಯೊಬ್ಬರು ಬಸ್ ಡಿಕ್ಕಿ ಹೊಡೆದು ಸಾವಿಗೀಡಾಗಿರುವುದಾಗಿ ವರದಿಯಾಗಿದೆ. ಬೀಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪಂಕಜಾ ಮುಂಡೆ ಸೋತರೆ ತಾನು ಬದುಕುವುದಿಲ್ಲ ಎಂದು ವಿಡಿಯೊ ಹೇಳಿಕೆಯೊಂದರಲ್ಲಿ ತಿಳಿಸಿದ್ದ ಟ್ರಕ್ ಚಾಲಕ ಸಚಿನ್ ಕೊಂಡಿಬಾ ಮುಂಡೆ ಎಂಬವರು ಬಸ್ಸು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಇದೊಂದು ಆತ್ಮಹತ್ಯೆ ಪ್ರಕರಣವೆಂದು ಶಂಕಿಸಲಾಗಿದೆ. ಆದರೆ ಇದು ಆತ್ಮಹತ್ಯೆಯೋ, ಕೊಲೆಯೋ ಎಂದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಪಂಕಜಾ ಮುಂಡೆ ಸೋತರೆ ಬದುಕುವುದಿಲ್ಲ ಎಂದು ಸಚಿನ್ ವಿಡಿಯೊವೊಂದರಲ್ಲಿ ಹೇಳಿಕೊಂಡಿದ್ದರು. ಫಲಿತಾಂಶ ಹೊರಬಿದ್ದ ಬಳಿಕ ಬೀಡ್ ಕ್ಷೇತ್ರದಲ್ಲಿ ಪಂಕಜಾ ಮುಂಡೆ ಕಾಂಗ್ರೆಸ್ನ ಬಜರಂಗ್ ಸೋನಾವಾನೆ ವಿರುದ್ಧ 6,553 ಮತಗಳ ಅಂತರದಿಂದ ಸೋತಿದ್ದಾರೆ. ಚುನಾವಣೆ ಫಲಿತಾಂಶದ ಬಳಿಕ ಸಚಿನ್ ಬೇಸರಗೊಂಡು ಮೌನವಾಗಿದ್ದರು ಎನ್ನಲಾಗಿದೆ. ಇದರ ಬೆನ್ನಲ್ಲೇ ಅವರು ಅಪಘಾತದಲ್ಲಿ ಮೃತಪಟ್ಟಿರುವುದು ಸಾಕಷ್ಟು ಅನಮಾನಗಳಿಗೆ ಕಾರಣವಾಗಿದೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.