ಮಂಗಳೂರು: ಕರ್ನಾಟಕ ಜಾನಪದ ಪರಿಷತ್ತು ಬಂಟ್ವಾಳ ತಾಲೂಕು ಘಟಕವು `ಪತ್ತನಾಜೆ’ ಜಾನಪದ ಹಬ್ಬ ಭಾನುವಾರ ಆಯೋಜಿಸಿದೆ. ಮೇ 19ರಂದು ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರಿನ ಸಹಕಾರದೊಂದಿಗೆ ತಾಲೂಕು ಘಟಕವು ಬಿ.ಸಿ. ರೋಡ್ ನ ಲಯನ್ಸ್ ಸೇವಾ ಮಂದಿರದಲ್ಲಿ ಈ ಕಾರ್ಯಕ್ರಮ ಆಯೋಜಿಸಿದೆ ಎಂದು ಪ್ರಧಾನ ಸಂಚಾಲಕ ಗೋಪಾಲ ಅಂಚನ್ ಹೇಳಿದ್ದಾರೆ. ಈ ಬಗ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬೆಳಿಗ್ಗೆ 10 ಗಂಟೆಗೆ ಮಂಜಮ್ಮ ಜೋಗತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶುದ್ಧ, ಸಾಂಪ್ರದಾಯಿಕ ಆಹಾರವನ್ನು ಯುವಜನರಿಗೆ ಪರಿಚಯಿಸುವ ಉದ್ದೇಶದಿಂದ ಜಾನಪದ ಆಹಾರ ಮೇಳ, ಸಾಂಸ್ಕೃತಿಕ ಮೇಳ, ಜಾನಪದ ಕೂಟ, ಜಾನಪದ ವಸ್ತುಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಪತ್ತನಾಜೆ ಬಗ್ಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸಹಪ್ರಾಧ್ಯಾಪಕ ದಿವಾ ಕೊಕ್ಕಡ ವಿಶೇಷ ಉಪನ್ಯಾಸ ನೀಡುವರು.
ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ರಾಮ ಭಟ್, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಮೇಯರ್ ಸುಧೀರ್ ಶೆಟ್ಟಿ, ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ, ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ತುಕಾರಾಮ ಪೂಜಾರಿ, ಪ್ರಮುಖರಾದ ಎ.ಸಿ. ಭಂಡಾರಿ, ರಘುನಾಥ ಸೋಮಯಾಜಿ, ಅರ್ಜುನ್ ಭಂಡಾರ್ಕರ್, ಡಿ. ಚಂದ್ರಹಾಸ ಶೆಟ್ಟಿ ರಂಗೋಲಿ, ಜಗನ್ನಾಥ ಚೌಟ ಬದಿಗುಡ್ಡೆ, ಸುಧಾಕರ ಆಚಾರ್ಯ, ಪಮ್ಮಿ ಕೊಡಿಯಾಲ್ ಬೈಲ್ ಭಾಗವಹಿಸುವರು ಎಂದು ಅವರು ಮಾಹಿತಿ ನೀಡಿದರು.
ಸಂಘಟನೆಯ ಪ್ರಮುಖರಾದ ರಾಜೇಶ್ ಸ್ಕೈಲಾರ್ಕ್, ಪ್ರಮೀಳಾ ಮಾಣೂರು, ಅನಿಲ್ ಪಂಡಿತ್, ಪ್ರತಿಭಾ ಪಿ. ಶೆಟ್ಟಿ, ಅಕ್ಬರ್ ಅಲಿ ಉಪಸ್ಥಿತರಿದ್ದರು.