ದಾವಣಗೆರೆ: ವೈದ್ಯರನ್ನು ದೇವರೆಂದು ನಂಬುವ ದೇಶ ನಮ್ಮದು. ಅಂತಾ ದೇಶದಲ್ಲಿ ವೈದ್ಯರ ಯಡವಟ್ಟಿನಿಂದಾಗಿ ಈಗಷ್ಟೇ ಜಗತ್ತು ಕಾಣುತ್ತಿದ್ದ ಪುಟ್ಟ ಕಂದಮ್ಮ ಮರ್ಮಾಂಗವನ್ನೇ ಕಳೆದುಕೊಂಡ ದುರಂತ ದಾವಣಗೆರೆಯಲ್ಲಿ ನಡೆದಿದೆ. ಇಲ್ಲಿನ ಜಿಲ್ಲಾಸ್ಪತ್ರೆಯ ವೈದ್ಯರೊಬ್ಬರು ಹೆರಿಗೆ ಮಾಡಿಸುವ ವೇಳೆ ಈ ದುರ್ಘಟನೆ ನಡೆದಿದೆ. ವೈದ್ಯರ ಯಡವಟ್ಟಿನಿಂದಾಗಿ ಮರ್ಮಾಂಗ ಕಳೆದುಕೊಂಡ ಮಗು ಕೊನೆಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಮನಕಲುಕುವ ಘಟನೆ ವರದಿಯಾಗಿದೆ.
ದಾವಣಗೆರೆ ಕೊಂಡಜ್ಜಿ ರಸ್ತೆಯಲ್ಲಿರೋ ಮಹಿಳೆಯೊಬ್ಬರು ಹೆರಿಗೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಹೆರಿಗೆಯ ವೇಳೆ ಮಹಿಳೆಗೆ ಸಿಸೇರಿಯನ್ ಮಾಡಿಸಲು ಮುಂದಾದರು. ಆದರೆ ಈ ವೇಳೆ ವೈದ್ಯರ ಅಚಾತುರ್ಯದಿಂದ ಮಗುವಿನ ಮರ್ಮಾಂಗ ಕತ್ತರಿಸಲ್ಪಟಿದೆ ಎನ್ನಲಾಗಿದೆ.
ಜೂನ್ 27ರಂದು ಈ ಘಟನೆ ನಡೆದಿದೆ. ವೈದ್ಯ ನಿಜಾಮುದ್ದೀನ್ ಎಂಬವರು ಮಹಿಳೆಗೆ ಸಿಸೇರಿಯನ್ ಮಾಡಿಸುವ ವೇಳೆ ಮಗುವಿನ ಮರ್ಮಾಂಗ ಕತ್ತರಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಬಳಿಕ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದು, ಬಳಿಕ ಮಗುವನ್ನ ಬಾಪುಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಆದರೆ ಅಲ್ಲಿ ಚಿಕಿತ್ಸೆ ಫಲಿಸದೆ ಮಗು ಸಾವನ್ನಪ್ಪಿದೆ.
ಮಗುವಿನ ಸಾವಿಗೆ ವೈದ್ಯರೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಮಗುವಿನ ಸಾವಿಗೆ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಸ್ಪತ್ರೆ ಮುಂದೆ ಪೋಷಕರು ಪ್ರತಿಭಟನೆ ಮಾಡಿದ್ದಾರೆ. ಮಗುವಿನ ಸಾವಿಗೆ ಕಾರಣನಾದ ವೈದ್ಯನನ್ನು ಅಮಾನತು ಮಾಡುವಂತೆ ಪೋಷಕರು ಆಗ್ರಹಿಸಿದ್ದಾರೆ.