ಮೂಡುಬಿದಿರೆ : ಚೌಟರ ಅರಮನೆಯ ಆಡಳಿತಕ್ಕೆ ಒಳಪಟ್ಟಿ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಪುನಃಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಫೆ.28ರಿಂದ ಮಾ.7ರವರೆಗೆ ಧಾರ್ಮಿಕ ಕಾರ್ಯಕ್ರಮ, ಮಾ.6ರಂದು ಬ್ರಹ್ಮಕಲಶೋತ್ಸವ ನಡೆಸುವುದೆಂದು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಭಾನುವಾರ ಸಂಜೆ ದೇವಳದ ಆವರಣದಲ್ಲಿ ನಡೆದ ಸಭೆಯ ಮೊದಲು ಪುನಃಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವದ ದಿನಾಂಕವನ್ನು ತಂತ್ರಿವರೇಣ್ಯರು, ಅರ್ಚಕ ವರ್ಗ, ಜೀರ್ಣೋದ್ಧಾರ ಸಮಿತಿ ದೇವಳದ ಸಿಬ್ಬಂದಿಯನ್ನೊಳಗೊಂಡು ಸಪರಿವಾರ ಶ್ರೀ ದೇವರಿಗೆ ಪ್ರಾರ್ಥನಾ ಪೂರ್ವಕವಾಗಿ ನಿವೇದಿಸಿಕೊಳ್ಳಲಾಯಿತು.
ಎಡವದವು ವೆಂಕಟೇಶ ತಂತ್ರಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ದಿನಾಂಕ ಘೋಷಿಸಿ ಶ್ರೀ ದೇವಳಕ್ಕೆ ಸಂಬಂಧಪಟ್ಟ ಊರಿನ ಜನರು ಬ್ರಹ್ಮಕಲಶ ಪರ್ಯಂತ ಪಾಲಿಸಬೇಕಾದ ನಿಯಾಮಾವಳಿ ತಿಳಿಸಿದರು.
ದೇವಳದ ಆನುವಂಶಿಕ ಆಡಳಿತ ಮೊಕ್ತಸರ ಚೌಟರ ಅರಮನೆಯ ಕುಲದೀಪ್ ಎಂ.ಮಾತನಾಡಿ, ಭಕ್ತರ ಸಂಕಲ್ಪ, ದೇವರ, ಭಕ್ತರ ಕರಸೇವೆ, ದಾನಿಗಳ ಕೊಡುಗೆಯೊಂದಿಗೆ ವ್ಯವಸ್ಥಿತ ರೀತಿಯಲ್ಲಿ ದೇವಾಲಯ ಜೀರ್ಣೋದ್ಧಾರಗೊಳ್ಳುತ್ತಿದೆ. ಶೇ.75ರಷ್ಟು ಕೆಲಸಗಳು ಮುಗಿದಿದ್ದು, ಮುಂದಿನ ಎಲ್ಲ ಕೆಲಸಕ್ಕೂ ಭಕ್ತರ ಸಹಕಾರ ಅಗತ್ಯ ಎಂದರು.
ದೇವಳದ ವಾಸ್ತುತಜ್ಞ ಗುಂಡಿಬೈಲು ಸುಬ್ರಹ್ಮಣ್ಯ ಭಟ್. ಪ್ರಧಾನ ಅರ್ಚಕ ಅಡಿಗಳ ಅನಂತಕೃಷ್ಣ ಭಟ್, ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿ ಕೆ.ಶ್ರೀಪತಿ ಭಟ್, ವಿದ್ಯಾ ರಮೇಶ್ ಭಟ್, ನೀಲೇಶ್ ಶೆಟ್ಟಿ ಸಹಿತ ಪ್ರಮುಖರು, ಭಕ್ತರು ಉಪಸ್ಥಿತರಿದ್ದರು. ಪ್ರಶಾಂತ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.