ಬೆಂಗಳೂರು: ಟೀಂ ಇಂಡಿಯಾದ ನಿರ್ಗಮಿತ ಕೋಚ್ ರಾಹುಲ್ ದ್ರಾವಿಡ್ ಮತ್ತೊಮ್ಮೆ ಮಾದರಿ ಕೆಲಸಕ್ಕೆ ಸುದ್ದಿಯಾಗಿದ್ದಾರೆ. 2024ರ ಟಿ20 ವಿಶ್ವಕಪ್ ಟೂರ್ನಿ ಗೆದ್ದ ಹಿನ್ನೆಲೆಯಲ್ಲಿ ಬಿಸಿಸಿಐ ನೀಡಿದ ಬಹುಮಾನ ಮೊತ್ತದಲ್ಲಿ 2.5 ಕೋಟಿ ರೂ. ಹಣವನ್ನು ಹಿಂದಿರುಗಿಸಿದ್ದಾರೆ. ಸಹಾಯಕ ಕೋಚ್ ಪಡೆಯುವಷ್ಟೇ ಮೊತ್ತ 2.5 ಕೋಟಿ ರೂ. ಮಾತ್ರ ಪಡೆದು, ಉಳಿದ ಹಣವನ್ನು ಹಿಂದಿರುಗಿಸಿ ಸಮಾನ ಕೆಲಸಕ್ಕೆ ಸಮಾನ ವೇತನವೆಂಬಂತೆ ಸಮಾನತೆ ಸಾರಿ ಸುದ್ದಿಯಾಗಿದ್ದಾರೆ. ರಾಹುಲ್ ದ್ರಾವಿಡ್ರ ಈ ನಡೆಗೆ ಕ್ರಿಕೆಟ್ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಬಿಸಿಸಿಐ ಘೋಷಿಸಿದ್ದ 125 ಕೋಟಿ ರೂ. ನಗದು ಬಹುಮಾನದಲ್ಲಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಕುಮಾರ್ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆಗೆ ತಲಾ 2.5 ಕೋಟಿ ರೂ. ಬಹುಮಾನ ಹಣ ಹಂಚಿಕೆ ಮಾಡಲಾಗಿತ್ತು. ಮುಖ್ಯ ಕೋಚ್ ರಾಹುಲ್ ದ್ರಾವಿಡ್ರಿಗೆ 5 ಕೋಟಿ ರೂ. ನೀಡಲಾಗಿತ್ತು. ಆದರೆ ಈ ರೀತಿಯ ಹಂಚಿಕೆಯನ್ನು ನಿರಾಕರಿಸಿದ ದ್ರಾವಿಡ್ 2.5 ಕೋಟಿ ರೂ. ಹಿಂದಿರುಗಿಸಿ, ಉಳಿದವರಂತೆ ತಾವೂ 2.5 ಕೋಟಿ ರೂ. ಮಾತ್ರ ಪಡೆದಿದ್ದಾರೆ. ಹೀಗಾಗಿ ದ್ರಾವಿಡ್ರ ಈ ಸದ್ಭಾವನೆಯನ್ನು ಬಿಸಿಸಿಐ ಗೌರವಿಸಿದೆ ಎಂದು ವರದಿಗಳು ತಿಳಿಸಿವೆ.
ಬಿಸಿಸಿಐ ಘೋಷಿಸಿದ್ದ 125 ಕೋಟಿ ರೂ. ಹಣದಲ್ಲಿ 15 ಮಂದಿ ಆಟಗಾರರು ತಲಾ 5 ಕೋಟಿ ರೂ. ಹಣ ಬಹುಮಾನದ ಹಣ ಪಡೆಯಲಿದ್ದಾರೆ. ಅಲ್ಲದೆ, ಮೀಸಲು ಆಟಗಾರರಿಗೂ ತಲಾ 1 ಕೋಟಿ ರೂ. ಬಹುಮಾನ ಸಿಗಲಿದೆ. ಇನ್ನುಳಿದ ಹಣ ಇತರ ಮುಖ್ಯಸ್ಥರು, ಸಿಬ್ಬಂದಿಗೆ ಹಂಚಿಕೆಯಾಗಲಿದೆ.