ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ರೈಲ್ವೆ ನೌಕರನೊಬ್ಬನನ್ನು ಪ್ರಯಾಣಿಕರು ಹೊಡೆದು ಕೊಂದ ಘಟನೆ ನಡೆದಿದೆ. ಬಿಹಾರದ ಬರೌನಿಯಿಂದ ದೆಹಲಿಗೆ ತೆರಳುತ್ತಿದ್ದ ಹಮ್ಸಫರ್ ಎಕ್ಸ್ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಈತನ ಕಿರುಕುಳದಿಂದ ಹೆದರಿದ ಬಾಲಕಿ ಕೂಡಲೇ ಕುಟುಂಬಸ್ಥರಿಗೆ ತಿಳಿಸಿದ್ದಾಳೆ. ಇದರಿಂದ ಕುಪಿತರಾದ ಬಾಲಕಿಯ ಕುಟುಂಬಸ್ಥರು ಹಾಗೂ ಇತರ ಪ್ರಯಾಣಿಕರು ವ್ಯಕ್ತಿಯನ್ನು ಥಳಿಸಿದ್ದು, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಬಿಹಾರದ ಸಿವಾನ್ನ ಕುಟುಂಬವೊಂದು ಹಮ್ಸಫರ್ ಎಕ್ಸ್ಪ್ರೆಸ್ ಮೂರನೇ ಎಸಿ ಕೋಚ್ನಲ್ಲಿ ಬುಧವಾರ ಪ್ರಯಾಣಿಸುತ್ತಿತ್ತು. ಈ ವೇಳೆ ಅದೇ ಕೋಚ್ನಲ್ಲಿ ರೈಲ್ವೆ ಉದ್ಯೋಗಿ ಪ್ರಶಾಂತ್ ಎಂಬಾತ ಪ್ರಯಾಣಿಸುತ್ತದ್ದ. ಆ ಕುಟುಂಬದ 11 ವರ್ಷದ ಬಾಲಕಿಯನ್ನು ಈತ ತನ್ನ ಸೀಟಿನಲ್ಲಿ ಕೂರಿಸಿಕೊಂಡು, ರಾತ್ರಿ 11.30ರ ವೇಳೆಗೆ ಬಾಲಕಿಯ ತಾಯಿ ವಾಶ್ರೂಂಗೆ ಹೋಗಿದ್ದಾಗ, ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದ ಎನ್ನಲಾಗಿದೆ. ಬಾಲಕಿಯು ತನ್ನ ತಾಯಿಯನ್ನು ವಾಶ್ರೂಂಗೆ ಕರೆದೊಯ್ದು ನಡೆದಿದ್ದನ್ನು ಹೇಳಿದ್ದಳು. ಇದನ್ನು ತಾಯಿಯು ಕೋಚ್ನಲ್ಲಿದ್ದ ತನ್ನ ಪತಿ ಹಾಗೂ ಕುಟುಂಬಸ್ಥರು ಮತ್ತು ಇತರ ಪ್ರಯಾಣಿಕರಿಗೆ ತಿಳಿಸಿದ್ದಾಳೆ. ಇದರಿಂದ ಕೋಪಗೊಂಡ ಅವರು ಪ್ರಶಾಂತ್ ಕುಮಾರ್ನನ್ನು ಮನಬಂದಂತೆ ಥಳಿಸಿದ್ದಾರೆ.
ಮರುದಿನ ಬೆಳಿಗ್ಗೆ 4.30ಕ್ಕೆ ರೈಲು ಕಾನ್ಪುರ ಕೇಂದ್ರ ನಿಲ್ದಾಣವನ್ನು ತಲುಪಿದ್ದು, ಪ್ರಯಾಣಿಕರು ಪ್ರಶಾಂತ್ ಕುಮಾರ್ನನ್ನು ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆತನ ವಿರುದ್ಧ ದೂರು ನೀಡಿದ್ದಾರೆ. ಗಂಭೀರ ಗಾಯಗೊಂಡಿದ್ದ ಆತನನ್ನು ಪೊಲೀಸರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅದಾಗಲೇ ಆತ ಮೃತಪಟ್ಟಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ.