ಮಂಗಳೂರು: ತುಳುನಾಡಿಗೆ ಪ್ರತ್ಯೇಕ ರೈಲ್ವೆ ವಿಭಾಗಕ್ಕೆ ಸಂಬಂಧಿಸಿ ʻತುಳುನಾಡು ವಾರ್ತೆʼ ಪತ್ರಿಕೆಯಲ್ಲಿ ವಿಸ್ತೃತ ವರದಿ ಪ್ರಕಟಿಸಿದ ಬೆನ್ನಲ್ಲೇ ಇದೇ 17ರಂದು ಮಂಗಳೂರಿನಲ್ಲಿ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ದಕ್ಷಿಣ ಕನ್ನಡ ಮತ್ತು ಮಂಗಳೂರು ವ್ಯಾಪ್ತಿಯ ರೈಲ್ವೆ ಸಮಸ್ಯೆಗಳ ಕುರಿತು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ನಡೆಸಲಿದ್ದಾರೆ. ಅಲ್ಲದೆ, ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ರೈಲು ನಿಲ್ದಾಣಗಳ ವೀಕ್ಷಣೆ ಕೂಡ ಮಾಡಲಿದ್ದಾರೆ.
ತುಳುನಾಡಿಗೆ ಪ್ರತ್ಯೇಕ ರೈಲ್ವೆ ವಿಭಾಗಕ್ಕೆ ಆಗ್ರಹಿಸಿ ಆರಂಭವಾಗಿರುವ ಆನ್ಲೈನ್ ಪಿಟಿಷನ್ ಅಭಿಯಾನಕ್ಕೆ ಸಂಬಂಧಿಸಿ ʻತುಳುನಾಡು ವಾರ್ತೆʼ ವಾರಪತ್ರಿಕೆಯ ಕಳೆದ ವಾರದ ಸಂಚಿಕೆಯಲ್ಲಿ ವಿಸ್ತೃತ ವರದಿಯೊಂದು ಪ್ರಕಟವಾಗಿತ್ತು. ತುಳುನಾಡಿನ ರೈಲ್ವೆ ಸಮಸ್ಯೆಗಳ ಕುರಿತಂತೆ ಗಮನ ಸೆಳೆದಿತ್ತು. ಇದರ ಬೆನ್ನಲ್ಲೇ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ನೂತನ ಸಂಸದ ಕ್ಯಾ. ಬ್ರಿಜೇಶ್ ಚೌಟ ರೈಲ್ವೆ ಸಚಿವರಿಗೆ ಪತ್ರ ಬರೆದು ತುಳುನಾಡಿನ ರೈಲ್ವೆ ಸಮಸ್ಯೆಗಳ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿದ್ದರು. ಅದರಂತೆ ಸಂಸದರ ಪತ್ರಕ್ಕೆ ಸ್ಪಂದಿಸಿ ಸಚಿವರು ಮುಂದಿನ ವಾರವೇ ಸಭೆಯೊಂದನ್ನು ಮಂಗಳೂರಿನಲ್ಲೇ ಆಯೋಜಿಸಿದ್ದಾರೆ. ತಾವು ಬರೆದ ಪತ್ರಕ್ಕೆ ಸ್ಪಂದಿಸಿ ಸಚಿವರು ಸಭೆ ಆಯೋಜಿಸಿದ್ದಾರೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ಜು. 17ರ ಬುಧವಾರ ಬೆಳಿಗ್ಗೆ 9 ಗಂಟೆಗೆ ರೈಲ್ವೆ ರಾಜ್ಯ ಸಚಿವ ಸೆಂಟ್ರಲ್ ನಿಲ್ದಾಣ ಮತ್ತು 10 ಗಂಟೆಗೆ ಜಂಕ್ಷನ್ ರೈಲು ನಿಲ್ದಾಣ ವೀಕ್ಷಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಯಿಂದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಅವರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಸಂಜೆ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ಮಂಗಳೂರಿಗೆ ಸಚಿವರ ಭೇಟಿಯ ವೇಳೆ ತುಳುವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತುಳುನಾಡಿಗೆ ಪ್ರತ್ಯೇಕ ರೈಲ್ವೆ ವಿಭಾಗ ಆರಂಭಕ್ಕೆ ಹಕ್ಕೊತ್ತಾಯ ಮಂಡಿಸಬೇಕಾಗಿದೆ. ತುಳುನಾಡಿನ ರೈಲ್ವೆ ಸಮಸ್ಯೆಗಳ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿ, ಅವುಗಳ ಕ್ಷಿಪ್ರ ನಿವಾರಣೆಗೆ ಪ್ರಯತ್ನಿಸಬೇಕಾಗಿದೆ.
ತುಳುನಾಡಿನ ರೈಲ್ವೆ ಸಮಸ್ಯೆಗಳ ಬಗ್ಗೆ ʻತುಳುನಾಡು ವಾರ್ತೆʼ ವರದಿ ಬೆನ್ನಲ್ಲೇ ಜು.17ರಂದು ಮಂಗಳೂರಿನಲ್ಲಿ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣರ ಮಹತ್ವದ ಸಭೆ
RELATED ARTICLES