ಮಂಗಳೂರು: ತುಳುನಾಡಿನ ವಿವಿಧೆಡೆ ಮಂಗಳವಾರ ಮಳೆ ಸುರಿದಿದೆ. ಬಿಸಿಲ ಝಳದಿಂದ ತತ್ತರಿಸಿದ್ದ ಜನಕ್ಕೆ ಮಂಗಳವಾರದ ಮಳೆ ಕೊಂಚ ತಂಪೆರೆದಿದೆ.
ಮಂಗಳೂರು ತಾಲೂಕು, ಬೆಳ್ತಂಗಡಿ ಮತ್ತು ಕೇರಳದ ಕಾಸರಗೋಡು ತಾಲೂಕುಗಳಲ್ಲಿ ವಿವಿಧೆಡೆ ಮಳೆ ಸುರಿದಿದೆ.
ಬೆಳ್ತಂಗಡಿ ತಾಲೂಕಿನ ಶಿರ್ಲಾಲು, ಕರಂಬಾರು, ಮದ್ದಡ್ಕ, ನಾರಾವಿ, ಅಳದಂಗಡಿ, ಉಜಿರೆ, ಕರಂಬಾರು, ಬೆಳ್ತಂಗಡಿ ಪೇಟೆ, ಉಜಿರೆ ಸೇರಿದಂತೆ ವಿವಿಧೆಡೆ ಮಳೆಯಾಗಿದೆ.
ಮುಂಜಾನೆಯಿಂದ ಮೋಡ ಕವಿದ ವಾತಾವರಣವಿದ್ದು, ಸಂಜೆ ಹೊತ್ತಿಗೆ ವಿವಿಧೆಡೆ ಮಳೆ ಸುರಿದಿದೆ. ಬುಧವಾರವೂ ದ.ಕ., ಉಡುಪಿ ಜಿಲ್ಲೆಯ ವಿವಿಧೆಡೆ ಹಗುರದಿಂದ ಸಾಧಾರಣ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆದಾಗ್ಯೂ, ತುಳುನಾಡಿನಲ್ಲಿ ಬಿಸಿ ಮತ್ತು ಆದ್ರತೆಯ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಾಸರಗೋಡು ಜಿಲ್ಲೆಯಲ್ಲೂ ವಿವಿಧೆಡೆ ಮಳೆಯಾಗಿದೆ. ಸಾಮಾನ್ಯ ಮಳೆ ಜೊತೆಗೆ ಸಿಡಿಲು, ಗುಡುಗು ಕೂಡ ಇತ್ತು. ಮಾನ್ಯ ಮೇಗಿನಡ್ಕದ ನಾರಾಯಣ ನಾಯ್ಕ ಎಂಬವರ ಮನೆ ಸಿಡಿಲು ಬಡಿದು ಹಾನಿಗೀಡಾಗಿದೆ. ಕಿಟಕಿ ಬಳಿ ಮಲಗಿದ್ದ ನಾರಾಯಣ ನಾಯ್ಕ ಗಾಯಗೊಂಡಿದ್ದಾರೆ. ಕಿಟಕಿ, ಗೋಡೆ, ವಿದ್ಯುತ್ ಮೀಟರ್ ಹಾಗೂ ವಯರಿಂಗ್ ಉರಿದು ಹೋಗಿದೆ. ಚೆರ್ಕಳ ಪೇಟೆ ಬಳಿ ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳ್ಳದೆ ಇರುವುದರಿಂದ ರಸ್ತೆಯಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
ಸುಳ್ಯ ಹಾಗೂ ಸುಬ್ರಹ್ಮಣ್ಯದಲ್ಲಿ ಸಂಜೆ ಸುಮಾರು ಏಳು ಗಂಟೆಗೆ ಆಕಾಶ ಕೆಂಪು ಬಣ್ಣದಿಂದ ಕಂಡುಬಂತು. ಸ್ಥಳೀಯರು ಫೋಟೊ ಕ್ಲಿಕ್ಕಿಸಿಕೊಂಡಿದ್ದು ಜಾಲತಾಣಗಳಲ್ಲಿ ವೈರಲ್ ಆಗಿದೆ.