ಮೂಡುಬಿದಿರೆಯ ಹೋಲಿ ರೋಸರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಡಾ. ರಾಮಕೃಷ್ಣ ಶಿರೂರು ಅವರು ಶಿಕ್ಷಣ ಸೌರಭ – 2025 ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. 2025 ಮಾರ್ಚ್ 16 ರಂದು ಶಿವಮೊಗ್ಗದ ಕರ್ನಾಟಕ ಸಂಘ ಸಭಾಭವನದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕನ್ನಡ ನುಡಿ ವೈಭವ-2025ರ ಸಮಾವೇಶದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಬರಹಗಾರರ ಸಂಘದ ಸ್ಥಾಪಕ ಅಧ್ಯಕ್ಷರಾದ ಮಧು ನಾಯಕ್ ಹೂವಿನಹಡಗಲಿ ಅವರು ತಿಳಿಸಿರುತ್ತಾರೆ.
ಎಂ. ಎ. ಬಿ. ಎಡ್. ಪದವೀಧರರಾದ ಡಾ.ರಾಮಕೃಷ್ಣ ಶಿರೂರು ಹಿಂದಿ ಭಾಷೆಯಲ್ಲಿ ರಾಜಭಾಷಾ ವಿದ್ವಾನ್ ಪದವಿಯನ್ನು ಪಡೆದಿರುತ್ತಾರೆ. ಇವರು ಮೂಲತ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಮೇಲ್ಪಂಗ್ತಿಯ ಶಾನುಭೋಗರ ಮನೆತನಕ್ಕೆ ಸೇರಿದ ಭವಾನಿ ಶಂಕರ ಶಾನುಭೋಗ ಮತ್ತು ಸರೋಜಿನಿ ಶಾನುಭೋಗ ಅವರ ಪುತ್ರ. 1994ರಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಶ್ರೀಮಂಗಲ ಪದವಿ ಪೂರ್ವ ಕಾಲೇಜಿನಲ್ಲಿ ಒಂದು ವರ್ಷ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, 1995 ರಿಂದ ಮೂಡುಬಿದಿರೆಯ ಹೋಲಿ ರೋಸರಿ ಪ್ರೌಢಶಾಲೆಯಲ್ಲಿ ಕನ್ನಡ ಆಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಿರುವ ಇವರು ಮೂಡುಬಿದಿರೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಮತ್ತು ಶಿಕ್ಷಕ ಸಂಘಟನಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರಿಂದ ಮೂಡುಬಿದಿರೆಯಲ್ಲಿ ಇನ್ನಷ್ಟು ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ಮುಂದುವರಿಯಲಿ ಎಂದು ಹಾರೈಸಿ ಮಧು ನಾಯಕ್ ಹೂವಿನಹಡಗಲಿ ಅವರು ಡಾ.ರಾಮಕೃಷ್ಣ ಶಿರೂರು ಅವರಿಗೆ ಅಭಿನಂದನೆ ಸಲ್ಲಿಸಿರುತ್ತಾರೆ.