ಪಡುಬಿದ್ರಿ: ಕಳೆದ 27 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪಡುಬಿದ್ರಿ ಪೊಲೀಸರು ಬೆಂಗಳೂರಿನಿಂದ ಬಂಧಿಸಿದ್ದಾರೆ. ಬಾಲಕಿಯೊಬ್ಬಳ ಮೇಲೆ ಉಡುಪಿ ಹಾಗೂ ಮಣಿಪಾಲದ ಲಾಡ್ಜ್ಗಳಲ್ಲಿ ಅತ್ಯಾಚಾರ ಎಸಗಿದ್ದ ಆರೋಪವಿದ್ದ ಕುಂದಾಪುರದ ಜಮಾಲ್ ಎಂಬಾತ ಬೆಂಗಳೂರಿನ ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲೆಮರೆಸಿಕೊಂಡು ತನ್ನ ಸಂಸಾರದೊಂದಿಗೆ ವಾಸವಿದ್ದುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಪಡುಬಿದ್ರಿ ಠಾಣೆಯ ಎಎಸ್ಐ ರಾಜೇಶ್, ಎಚ್ಸಿ ರಾಜೇಶ್ ಹೆರ್ಗ, ಪಿಸಿ ಸಂದೇಶ್ ಅವರ ತಂಡ ಜಮಾಲ್ನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಯಲ ನ್ಯಾಯಾಂಗ ಬಂಧನ ವಿಧಿಸಿದೆ. ಪಡುಬಿದ್ರಿಯ ಉಚ್ಚಿಲದ ನಿವಾಸಿ ನಸೀಮಾ ಎಂಬವರ ಮನೆಯಲ್ಲಿ ಕೆಲಸಕ್ಕಿದ್ದ ಬಾಲಕಿಯ ಮೇಲೆ ಜಮಾಲ್ ಅತ್ಯಾಚಾರ ಎಸಗಿದ್ದ. ಮಣಿಪಾಲದ ಲಾಡ್ಜ್ ಒಂದರಲ್ಲಿ 12 ದಿನಗಳ ಕಾಲ ದಿಗ್ಬಂಧನದಲ್ಲಿರಿಸಿ ಅತ್ಯಾಚಾರ ನಡೆಸಿದ್ದ. 1997ರಲ್ಲಿ ಬಾಲಕಿ ಮನೆಯಲ್ಲಿ ಹೇಳದೆ ಹೋಗಿದ್ದ ಬಗ್ಗೆ ನಸೀಮಾ ದೂರು ನೀಡಿದ್ದರು. ಬಳಿಕ ಆಕೆಯನ್ನು ಊರಿಗೆ ಕಳುಹಿಸುವ ನೆಪದಲ್ಲಿ ಉಡುಪಿಯಲ್ಲೂ ಲಾಡ್ಜ್ ಮಾಡಿ ಇರಿಸಿಕೊಂಡಿದ್ದ ಬಗ್ಗೆ ಜಮಾಲ್ ವಿರುದ್ಧ ದೂರು ದಾಖಲಾಗಿತ್ತು.
ಬಾಲಕಿಯ ಬಗ್ಗೆ ಸಂಶಯಗೊಂಡು ಲಾಡ್ಜ್ನವರು ನೀಡಿದ್ದ ದೂರಿನನ್ವಯ ಪೊಲೀಸರು ಆತನನ್ನು ವಿಚಾರಿಸಿದ್ದರು. ಬಾಲಕಿಯನ್ನು ವಿಚಾರಿಸಿದಾಗ ನಡೆದದ್ದನ್ನು ಆಕೆ ಹೇಳಿದ್ದಳು. ಬಂಧಿತನಾಗಿದ್ದ ಜಮಾಲ್ಗೆ ಬಳಿಕ ಜಾಮೀನು ಸಿಕ್ಕಿತ್ತು. ಆ ನಂತರ 27 ವರ್ಷಗಳಿಂದ ಆತ ತಲೆ ಮರೆಸಿಕೊಂಡಿದ್ದ. ಆತನ ಬಂಧನಕ್ಕೆ ಕೋರ್ಟ್ ವಾರೆಂಟ್ ಜಾರಿಗೊಳಿಸಿತ್ತು.