ಮಡಿಕೇರಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮತ್ತು ಇನ್ನ ನಾಲ್ಕು ದಿನ ಧಾರಾಕಾರ ಮಳೆ ಸುರಿಯಲಿರುವುದರಿಂದ ಸಂಪಾಜೆ-ಮಡಿಕೇರಿ ನಡುವೆ ರಾತ್ರಿ ವೇಳೆ ಎಲ್ಲಾ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವುದರಿಂದ ಕುರ್ತೋಜಿ ಬಳಿ ಭೂ ಕುಸಿತದ ಸಂಭವ ಕಂಡು ಬಂದಿದೆ. ಅಲ್ಲದೆ ಹವಾಮಾನ ಇಲಾಖೆಯು ಇನ್ನೂ ನಾಲ್ಕು ದಿನ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಹೀಗಾಗಿ ಜು. 18ರಿಂದ ಜು. 22ರವರೆಗೆ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 6 ಗಂಟೆ ವರೆಗೆ ತುರ್ತು ಸೇವೆಗಳ ಮತ್ತು ಪ್ರಕೃತಿ ವಿಕೋಪ ಸಂಬಂಧಿತ ಕಾರ್ಯದ ನಿಮಿತ್ತ ಕಾರ್ಯ ನಿರ್ವಹಿಸುವ ಅಧಿಕಾರಿ ಅಥವಾ ಸಿಬ್ಬಂದಿ ಸಂಚರಿಸುವ ವಾಹನಗಳನ್ನು ಹೊರತು ಪಡಿಸಿ ಇನ್ನುಳಿದ ಯಾವುದೇ ವಾಹನಗಳು ಸಂಚರಿಸುವುದನ್ನು ನಿರ್ಬಂದಿಸಲಾಗಿದೆ. ಈ ಕುರಿತು ಕೊಡಗು ಜಿಲ್ಲಾಧಿಕಾರಿಯವರು ತಮ್ಮ ಆದೇಶ ಹೊರಡಿಸಿದ್ದಾರೆ. ಮಡಿಕೇರಿ ಮೂಲಕ ಮೈಸೂರು, ಬೆಂಗಳೂರು ಮುಂತಾದ ಸ್ಥಳಗಳಿಗೆ ಪ್ರಯಾಣಿಸಬೇಕಾದ ವಾಹನಗಳು ಬದಲಿ ರಸ್ತೆಯಾದ ಚಾರ್ಮಾಡಿ ಘಾಟಿ, ಕೊಟ್ಟಿಗೆಹಾರ ಮಾರ್ಗಗಳನ್ನು ಬಳಸಬಹುದಾಗಿದೆ.