ದಾವಣಗೆರೆ: ಚಿತ್ರದುರ್ಗದ ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾ ತಂಡದಿಂದ ದಾವಣಗೆರೆಯ ಸಾಂಸ್ಕೃತಿಕ ರಾಯಭಾರಿ ಎಂದೇ ಖ್ಯಾತರಾದ ಸಾಲಿಗ್ರಾಮ ಗಣೇಶ್ ಶೆಣೈ ಅವರ ಬಹುಮುಖ ಪ್ರತಿಭೆಯನ್ನು ಗುರುತಿಸಿ “ಕಲಾಕೌಸ್ತುಭ” ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರೂ, ರಾಜ್ಯಾಧ್ಯಕ್ಷರಾದ ಕನಕ ಪ್ರೀತೀಶ್ ತಿಳಿಸಿದ್ದಾರೆ.

ನಾಲ್ಕು ದಶಕಗಳಿಂದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಯಕ್ಷಗಾನ, ಧಾರ್ಮಿಕ, ಸಾಮಾಜಿಕ ಕಾಳಜಿಯೊಂದಿಗೆ ಕಠಿಣ ಪರಿಶ್ರಮದಿಂದ ಎಡೆಬಿಡದೇ ನಿರಂತರ ಚುಟುವಟಿಕೆಗಳಲ್ಲಿ ತೊಡಗಿಸಿಕೊಂಡ ಶೆಣೈಯವರಿಗೆ ಕರುನಾಡ ಹಣತೆ ಕವಿ ಬಳಗದ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷರಾದ ಶ್ರೀಮತಿ ರೇಖಾ ಶಿವರಾಮ ಭಟ್, ದಾವಣಗೆರೆ ಜಿಲ್ಲಾಧ್ಯಕ್ಷರಾದ ಶಾಂತಕುಮಾರ್ ಎಸ್.ಟಿ ಪಲ್ಲಾಗಟ್ಟಿ, ರಾಜ್ಯ ಕಾರ್ಯದರ್ಶಿ ಹೆಚ್.ಎಸ್.ಗೌಡರ ಹಾಗೂ ಕಲಾಕುಂಚ, ಯಕ್ಷರಂಗ, ಸಿನಿಮಾಸಿರಿ, ಕರ್ನಾಟಕ ಸಗಮ ಸಂಗೀತ ಪರಿಷತ್, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ, ದಾವಣಗೆರೆ ಜಿಲ್ಲಾ ಛಾಯಾಗ್ರಾಹಕ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಶೆಣೈಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.