ಬಂಟ್ವಾಳ: ಶಿರಾಡಿ ಘಾಟಿಯಲ್ಲಿ ಸತತ ಮಳೆಯಿಂದಾಗಿ ಭೂ ಕುಸಿತ ಉಂಟಾಗಿರುವುದರಿಂದ ಸಕಲೇಶಪುರ, ಹಾಸನ ಬೆಂಗಳೂರು ಹೋಗುವವರಿಗೆ ಬದಲಿ ರಸ್ತೆಯಲ್ಲಿ ಪ್ರಯಾಣಿಸುವಂತೆ ಸೂಚಿಸಲಾಗಿದೆ. ಈ ಕುರಿತು ಮಾಣಿಯಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರು ಈ ಮಾರ್ಗವಾಗಿ ಬರುವ ವಾಹನಗಳಿಗೆ ಬದಲಿ ರಸ್ತೆ ಉಪಯೋಗಿಸುವಂತೆ ಸಲಹೆ ನೀಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಶಿರಾಡಿ ಘಾಟಿಯಲ್ಲಿ ಭೂ ಕುಸಿತ ಉಂಟಾಗಿದೆ. ಕಳೆದ ರಾತ್ರಿ ಓಮಿನಿಯೊಂದು ಮಣ್ಣಿನಡಿಗೆ ಸಿಲುಕಿದ್ದು, ಅದೃಷ್ಟವಶಾತ್ ಅದರಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭೂ ಕುಸಿತದಿಂದಾಗಿ ಘಾಟಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಈ ಹಿನ್ನೆಲೆಯಲ್ಲಿ ಈಗ ಸಕಲೇಶಪುರ ಮೂಲಕ ಹಾಸನ, ಬೆಂಗಳೂರು ಪ್ರಯಾಣಿಸುವ ಪ್ರಯಾಣಿಕರು ಮಡಿಕೇರಿ, ಮೈಸೂರು ಮಾರ್ಗ ಬಳಸಿಕೊಳ್ಳುವಂತೆ ಪೊಲೀಸರು ಸೂಚಿಸಿದ್ದಾರೆ.