Saturday, May 24, 2025
Homeಮಂಗಳೂರುಮಂಗಳೂರು | ಹತ್ಯೆಗೈದು 29 ತುಂಡು ಮಾಡಿ ನಗರದಲ್ಲಿ ಎಸೆದಿದ್ದ ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ...

ಮಂಗಳೂರು | ಹತ್ಯೆಗೈದು 29 ತುಂಡು ಮಾಡಿ ನಗರದಲ್ಲಿ ಎಸೆದಿದ್ದ ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ | ಮೂವರ ಅಪರಾಧ ಸಾಬೀತು

ಮಂಗಳೂರು: ನಗರದ ಅತ್ತಾವರ ನಿವಾಸಿ ಶ್ರೀಮತಿ ಶೆಟ್ಟಿ ಎಂಬವರನ್ನು ಹತ್ಯೆ ಮಾಡಿ, ಮೃತದೇಹವನ್ನು 29 ತುಂಡುಗಳನ್ನಾಗಿ ಮಾಡಿ ನಗರದ ಹಲವು ಕಡೆಗಳಲ್ಲಿ ಬಿಸಾಡಿದ್ದ ಪ್ರಕರಣದ ಮೂವರು ಆರೋಪಿಗಳ ಅಪರಾಧ ಸಾಬೀತಾಗಿದೆ. ನಗರವನ್ನೇ ಬೆಚ್ಚಿ ಬೀಳಿಸಿದ್ದ ಈ ಪ್ರಕರಣದ ವಿಚಾರಣೆ ನಡೆದು, ಮಂಗಳೂರಿನ ಒಂದನೇ ಹೆಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್.‌ ಶುಕ್ರವಾರ ತೀರ್ಪು ನೀಡಿದ್ದಾರೆ.
ನಗರದ ವೆಲೆನ್ಸಿಯಾ ಸಮೀಪದ ಸೂಟರ್‌ಪೇಟೆಯ ಜೋನಸ್‌ ಸ್ಯಾಮ್ಸನ್‌ ಅಲಿಯಾಸ್‌ ಜೋನಸ್‌ ಜೌಲಿನ್‌ ಸ್ಯಾಮ್ಸನ್‌ (40), ವಿಕ್ಟೋರಿಯಾ ಮಥಾಯಿಸ್‌ (47) ಮತ್ತು ಮರಕಡ ತಾರಿಪಾಡಿ ಗುಡ್ಡೆಯ ರಾಜು (34) ಎಂಬವರನ್ನು ಅಪರಾಧಿಗಳೆಂದು ಗುರುತಿಸಲಾಗಿದೆ. ಅಪರಾಧಿಗಳಲ್ಲಿ ರಾಜು ಎಂಬಾತ ಬಿಡುಗಡೆಗೊಂಡಿದ್ದು, ಉಳಿದಿಬ್ಬರು ಜೈಲಿನಲ್ಲೇ ಇದ್ದಾರೆ. ಇದೇ 17ರಂದು ಪ್ರಕರಣಕ್ಕೆ ಸಂಬಂಧಿಸಿದ ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗಲಿದೆ.
2019ರ ಮೇ 11ರಂದು ಕುರಿಫಂಡ್‌ ಹಣದ ವಿಷಯದಲ್ಲಿ ಶ್ರೀಮತಿ ಶೆಟ್ಟಿ ಅವರನ್ನು ಅಪರಾಧಿಗಳು ಹತ್ಯೆಗೈದಿದ್ದರು. ಅತ್ತಾವರದಲ್ಲಿ ಶ್ರೀ ಪೊಳಲಿ ಎಲೆಕ್ಟ್ರಾನಿಕ್ಸ್‌ ಅಂಗಡಿ ನಡೆಸುತ್ತಿದ್ದ ಶ್ರೀಮತಿ ಶೆಟ್ಟಿ, ಚಿಟ್‌ಫಂಡ್‌ ವ್ಯವಹಾರವನ್ನೂ ನಡೆಸುತ್ತಿದ್ದರು. ಈ ಕುರಿಫಂಡ್‌ನಲ್ಲಿ ಜೋನಸ್‌ ಸ್ಯಾಮ್ಸನ್‌ 2 ಸದಸ್ಯತ್ವ ಹೊಂದಿದ್ದು, ಮಾಸಿಕ ಕಂತು ಪಾವತಿಸಲು ವಿಫಲನಾಗಿದ್ದ. ಹಣ ಪಾವತಿಸುವಂತೆ ಶ್ರೀಮತಿ ಶೆಟ್ಟಿ ಒತ್ತಾಯಿಸುತ್ತಿದ್ದರು. 2019ರ ಮೇ 11ರಂದು ಬೆಳಿಗ್ಗೆ 9.15ಕ್ಕೆ ಹಣ ಕೇಳುವುದಕ್ಕಾಗಿ ಆರೋಪಿ ಜೋನಸ್‌ ಸ್ಯಾಮ್ಸನ್‌ ಮನೆಗೆ ತೆರಳಿದ್ದ ಶ್ರೀಮತಿ ಶೆಟ್ಟಿ ಮೇಲೆ ಮರದ ತುಂಡಿನಿಂದ ಸ್ಯಾಮ್ಸನ್‌ ಹೊಡೆದಿದ್ದ. ಇದರಿಂದ ಪ್ರಜ್ಞಾಹೀನರಾಗಿದ್ದ ಶ್ರೀಮತಿ ಶೆಟ್ಟಿಯವರನ್ನು ಸ್ಯಾಮ್ಸನ್‌ ಮತ್ತು ವಿಕ್ಟೋರಿಯಾ ಬಚ್ಚಲು ಕೋಣೆಗೆ ಎಳೆದೊಯ್ದು ಹರಿತವಾದ ಕತ್ತಿಯಿಂದ ಕುತ್ತಿಗೆ ಕೊಯ್ದು ಮೈಮೇಲಿದ್ದ ಚಿನ್ನಾಭರಣ ಸುಲಿಗೆ ಮಾಡಿ ದೇಹವನ್ನು 29 ತುಂಡು ಮಾಡಿ ಗೋಣಿಚೀಲದಲ್ಲಿ ತುಂಬಿಸಿ ನಗರದ ಹಲವೆಡೆ ಎಸೆದಿದ್ದರು.
ಸ್ಯಾಮ್ಸನ್‌ ಈ ಹಿಂದೆ ಹಂದಿ ಮಾಂಸ ಮಾಡುವ ಕೆಲಸದಲ್ಲಿದ್ದ ಮತ್ತು ಸಂಬಂಧಿಕರೊಬ್ಬರ ಹತ್ಯೆಯ ಆರೋಪಿಯೂ ಆಗಿದ್ದ. ಫಾಸ್ಟ್‌ಫುಡ್‌ ಅಂಗಡಿ ನಡೆಸುತ್ತಿದ್ದ ಈತನ ಮನೆಯಲ್ಲಿ ಈತ ಮತ್ತು ಪತ್ನಿ ಮಾತ್ರ ಇದ್ದರು. ರಾಜು ಸ್ಯಾಮ್ಸನ್‌ನ ಗೆಳೆಯನಾಗಿದ್ದ. ಆತನಿಗೆ ಕೊಲೆ ಮಾಡಿದ ವಿಷಯ ತಿಳಿಸಿ ಶೆಟ್ಟಿಯವರ ಆಭರಣಗಳನ್ನು ಆತನಿಗೂ ನೀಡಿದ್ದ. ಆರೋಪಿಗಳನ್ನು ಒಂದು ದಿನ ತನ್ನ ಮನೆಯಲ್ಲಿ ಉಳಿದುಕೊಳ್ಳಲು ಆಶ್ರಯ ನೀಡಿದ್ದ. ಹತ್ಯೆಯ ದಿನ ಶ್ರೀಮತಿ ಶೆಟ್ಟಿಗೆ ಸೂಟರ್‌ಪೇಟೆಯ ದ್ವಾರದ ಬಳಿ ಸ್ಯಾಮ್ಸನ್‌ ಸಿಕ್ಕಿದ್ದ. ಇದು ಅಲ್ಲಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ದಾಖಲಾಗಿತ್ತು. ಅದರ ಆಧಾರದಲ್ಲಿ ಬಂಧನ ನಡೆದಿತ್ತು.
ಕದ್ರಿ ಬಳಿಯ ಅಂಗಡಿಯೊಂದರ ಬಳಿ ರುಂಡ ಪತ್ತೆಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಮಂಗಳೂರು ಪೂರ್ವ ಠಾಣೆಯ ನಿರೀಕ್ಷಕ ಮಹೇಶ್‌ ಎಂ. ತನಿಖೆ ಕೈಗೆತ್ತಿಕೊಂಡಿದ್ದರು. ಫೊರೆನ್ಸಿಕ್‌ ವಿಭಾಗದ ವೈದ್ಯಾಧಿಕಾರಿ ಡಾ. ಜಗದೀಶ ರಾವ್‌ ಶವಪರೀಕ್ಷೆ ನಡೆಸಿದ್ದರು. ಇನ್ಸ್‌ಪೆಕ್ಟರ್‌ ಶಾಂತಾರಾಮ್‌ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಜುಡಿತ್‌ ಓಲ್ಗಾ ಮಾರ್ಗರೆಟ್‌ ಕ್ರಾಸ್ತಾ ಸಾಕ್ಷಿಗಳನ್ನು ವಿಚಾರಣೆ ಮಾಡಿ ವಾದ ಮಂಡಿಸಿದ್ದರು.

RELATED ARTICLES
- Advertisment -
Google search engine

Most Popular