ಉಡುಪಿ: ಮಣಿಪಾಲದ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಸಿರಿಸಿಂಗಾರದ ನೇಮದ ಪ್ರಯುಕ್ತ ಶನಿವಾರ ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ ನೆರವೇರಿತು.
ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ಅನ್ನಸಂತರ್ಪಣೆಯನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು. ಆಗಮಿಸಿದ ಭಕ್ತರಿಗೆ ಬೆಳಗ್ಗಿನಿಂದಲೇ ಕಬ್ಬಿನ ಹಾಲು ಸಹಿತ ತಂಪು ಪಾನೀಯಗಳ ವಿತರಣೆ ನಡೆಯಿತು. ಸಂಜೆ ಭಂಡಾರ ಮೆರವಣಿಗೆ ನಡೆದು ಬಬ್ಬುಸ್ವಾಮಿ ಹಾಗೂ ತನ್ನಿಮಾನಿಗ ನೇಮ ನೆರವೇರಿತು.
ದೈವಸ್ಥಾನದ ಆಡಳಿತ ಮೊಕ್ತೇಸರ ಟಿ. ಅಶೋಕ್ ಪೈ ಮತ್ತು ಕುಟುಂಬಸ್ಥರು, ಬೆಸ್ಟ್ ಸೆಲ್ಲರ್ಸ್ ಎಂಡಿ ಸಚಿನ್ ಪೈ ದಂಪತಿ, ಮಾಹೆ ವಿ.ವಿ. ಟ್ರಸ್ಟ್ನ ಟ್ರಸ್ಟಿ ವಸಂತಿ ಆರ್. ಪೈ, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಡಾ| ತಲ್ಲೂರು ಶಿವರಾಮ ಶೆಟ್ಟಿ, ದೈವಸ್ಥಾನದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಗುರಿಕಾರ ನಾರಾಯಣ ಕೆ. ಮತ್ತಿತರ ಗಣ್ಯರು ಉಪಸ್ಥಿತರಿದ್ದರು.