ಕಾಸರಗೋಡು: ಇಲ್ಲಿನ ಪೈವಳಿಕೆಯ ಕುರುಡುಪದವು ಎಂಬಲ್ಲಿ ಹಾವಿನಿಂದ ಕಚ್ಚಲ್ಪಟ್ಟ ಸಾವಿಗೆ ಸಂಬಂಧಿಸಿ ಕುತೂಹಲಕಾರಿ ಘಟನೆ ವರದಿಯಾಗಿದೆ. ಹಾವು ಕಡಿತದಿಂದ ಸಾವನ್ನಪ್ಪಿದ ಮಹಿಳೆಯ ಅಂತಿಮ ಸಂಸ್ಕಾರದ ವೇಳೆ ಕಚ್ಚಿದ ಹಾವು ಆಗಮಿಸಿ ಅಚ್ಚರಿ ಮೂಡಿಸಿದ್ದು, ಸ್ಥಳೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕುರುಡುಪದವು ನಿವಾಸಿ ಚೋಮು (62) ಜು.3ರ ಬುಧವಾರ ರಾತ್ರಿ ಹಾವು ಕಚ್ಚಲ್ಪಟ್ಟು ಸಾವನ್ನಪ್ಪಿದ್ದರು. ಗುರುವಾರ ಅವರ ಅಂತ್ಯ ಸಂಸ್ಕಾರ ನಡೆಸಲಾಗಿತ್ತು. ಬಳಿಕ ಸ್ಥಳೀಯ ಸಂಪ್ರದಾಯದಂತೆ ಮನೆಯ ಹಾಲ್ನಲ್ಲಿ ರಾತ್ರಿ ಒಂದು ಬಿಂದಿಗೆಯಲ್ಲಿ ನೀರು ಇಟ್ಟು ಅದರ ಸುತ್ತ ಬೂದಿ ಹರಡಲಾಗಿತ್ತು. ಯಾವುದಾದರೂ ಚಲನವಲನಗಳನ್ನು ಗಮನಿಸಲು ಬೂದಿ ಹರಡಲಾಗುತ್ತದೆ ಮತ್ತು ಕೋಣೆಯ ಬಾಗಿಲನ್ನು ಮುಚ್ಚಲಾಗುತ್ತದೆ.
ಮೃತರ ಕುಟುಂಬಸ್ಥರು ಶುಕ್ರವಾರ ಬೆಳಿಗ್ಗೆ ಎದ್ದು ನೋಡುವಾಗ ಬೂದಿಯ ನಡುವೆ ಇಟ್ಟಿದ್ದ ಬಿಂದಿಗೆಯ ನೀರು ಖಾಲಿಯಾಗಿತ್ತು ಮತ್ತು ಬಿಂದಿಗೆಯ ಸುತ್ತ ಹರಡಲಾಗಿದ್ದ ಬೂದಿಯ ಮೇಲೆ ಹಾವು ಹರಿದಂತಹ ದೃಶ್ಯ ಸೃಷ್ಟಿಯಾಗಿತ್ತು. ಇದು ಚೋಮುಗೆ ಕಚ್ಚಿದ್ದ ಹಾವು ರಾತ್ರಿ ಮತ್ತೆ ಆಗಮಿಸಿ ಬಿಂದಿಗೆಯಲ್ಲಿಟ್ಟಿದ್ದ ನೀರು ಕುಡಿದು, ಬೂದಿಯಲ್ಲಿ ಹರಿದಾಡಿದೆ ಎಂಬ ವದಂತಿ ಸ್ಥಳೀಯವಾಗಿ ಎಲ್ಲೆಡೆ ಹರಡಿತು. ಹಾವನ್ನು ಈಗಾಗಲೇ ಹಾವು ಹಿಡಿಯುವವರು ಹಿಡಿದು ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟು ಬಂದಿದ್ದರು. ಇದು ಈ ನಿಗೂಢತೆಗೆ ಇನ್ನಷ್ಟು ಕಾರಣವಾಯಿತು.
ಸಮಾಜದಲ್ಲಿ ಎಲ್ಲರೊಂದಿಗೆ ಬೆರೆತು, ಒಳ್ಳೆಯವರೆನಿಸಿದ್ದ ಚೋಮುವಿನ ಸಾವಿನ ರಹಸ್ಯದ ಬಗ್ಗೆ ಈಗ ಹಲವರಲ್ಲಿ ಆಶ್ಚರ್ಯವನ್ನುಂಟು ಮಾಡಿದೆಯಲ್ಲದೆ, ಕೆಲವರಲ್ಲಿ ಆಘಾತವನ್ನೂ ಉಂಟು ಮಾಡಿದೆ.