ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಕಾರ್ಗಿಲ್ ದಿನಾಚರಣೆಯನ್ನು 26/7/2024ನೇ ಶುಕ್ರವಾರದಂದು ಮೇರಿಹಿಲ್ನ ಜಿಲ್ಲಾ ಗೃಹರಕ್ಷಕದಳ ಕಛೇರಿ ಇಲ್ಲಿ ಕಾರ್ಗಿಲ್ ದಿನಾಚರಣೆಯ ಅಂಗವಾಗಿ ಕಾರ್ಗಿಲ್ನಲ್ಲಿ ಹುತಾತ್ಮರಾದವರಿಗೆ ಗೌರವ ನಮನವನ್ನು ಸಲ್ಲಿಸುತ್ತಾ, 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಣೆ ನಡೆಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ|| ಮುರಲೀ ಮೋಹನ್ ಚೂಂತಾರು ವಹಿಸಿದ್ದರು. 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತ ದೇಶಕ್ಕಾಗಿ ಮಡಿದ ಆ ಸೈನಿಕರ ಆತ್ಮಗಳಿಗೆ ಭಾವಪೂರ್ಣ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ರವರು ಮಾತನಾಡಿ ಪ್ರಾಣವನ್ನೇ ತೆತ್ತ ಸೈನಿಕರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ, ಆ ಸಮಯದಲ್ಲಿ ಪ್ರಧಾನಿಯಾಗಿದ್ದ ವಾಜಪೇಯಿಯವರು ಶಾಂತಿ ಸಂಧಾನಕ್ಕೆ ಪ್ರಯತ್ನಿಸುತ್ತಿರುವ ಸಮಯದಲ್ಲಿ ಪಾಪಿ ಪಾಕಿಸ್ತಾನ ಕಾರ್ಗಿಲ್ ಪ್ರದೇಶಕ್ಕೆ ಮೋಸದಿಂದ ಸೈನಿಕರನ್ನು ಕಳುಹಿಸಿ ಆಕ್ರಮಣ ಮಾಡಿದ್ದರು. ಮೇ 5 ರಂದು ಕಾರ್ಗಿಲ್ ಯುದ್ಧ ಆರಂಭವಾಗಿ ಜುಲೈ 26 ರಂದು ಕೊನೆಗೊಂಡಿರುತ್ತದೆ, ಒಟ್ಟು 24 ದಿನಗಳ ಕಾರ್ಗಿಲ್ ಕದನದಲ್ಲಿ ಭಾರತದ 200000 ಸೈನಿಕರು ದೇಶಕ್ಕಾಗಿ ಕಿಚ್ಚೆದೆಯಿಂದ ಹೋರಾಡಿದರು, ಸುಮಾರು 500ಕ್ಕೂ ಹೆಚ್ಚು ಸೈನಿಕರು ದೇಶಕ್ಕಾಗಿ ತಮ್ಮನ್ನೇ ಬಲಿದಾನ ಮಾಡಿ ಹುತಾತ್ಮರಾದರು. ಆಪರೇಷನ್ ವಿಜಯ್ ಮುಖಾಂತರ ಭಾರತದ ಸೇನೆ ಪಾಕಿಸ್ತಾನವನ್ನು ಬಗ್ಗು ಬಡಿದ ಸವಿನೆನಪಿಗಾಗಿ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸ್ ಎಂದು ದೇಶದೆಲ್ಲೆಡೆ ಆಚರಿಸಿ ದೇಶಕ್ಕೆ ಬಲಿದಾನ ಮಾಡಿದ ಸೈನಿಕರನ್ನು ಸ್ಮರಿಸುತ್ತಾ, ನಾವು ನಮ್ಮನ್ನು ದೇಶ ಸೇವೆಗಾಗಿ ಪುನರ್ಸಮರ್ಪಿಸುವ ವಿಶೇಷ ದಿನ ಎಂದು ಅವರು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಖ್ಯಾತ ವೈದ್ಯರಾದ ಡಾ|| ಕೇಶವರಾಜ್ ಎಂ.ಡಿ ಆರ್ಯುವೇದಿಕ್ ತಜ್ಞರು, ವೇದಮಾಯ ಆಸ್ಪತ್ರೆ ಮಂಗಳೂರು ಅವರು ಮಾತನಾಡಿ, ಜುಲೈ 26 ರಂದು ಕಾರ್ಗಿಲ್ನಲ್ಲಿ ನಡೆದ ಯುದ್ಧದಲ್ಲಿ ಶತ್ರುಗಳನ್ನು ಹಿಮ್ಮೆಟ್ಟಿ ವಿಜಯವನ್ನು ತಂದುಕೊಟ್ಟಿರುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಗೃಹರಕ್ಷಕರು ದೇಶದ ಒಳಗೆ ಪೊಲೀಸರು ಹಾಗೂ ಸೈನಿಕರಿಗೆ ರಕ್ಷಣಾ ಕಾರ್ಯದಲ್ಲಿ ಸಹಾಯಕರಾಗಿ ನಿಲ್ಲುವವರು. ಯೋಧರು ಕಾಶ್ಮೀರದ ಗಡಿಯಲ್ಲಿ ಕಾಯುವುದರಿಂದ ನಾವು ಇಂದು ನೆಮ್ಮದಿಯಿಂದ ಇದ್ದೇವೆ. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಪುಷ್ಪನಮನ ಸಲ್ಲಿಸಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲ, ಹಿರಿಯ ಗೃಹರಕ್ಷಕರಾದ ಸುನಿಲ್ ಕುಮಾರ್, ಧನಂಜಯ್, ರಾಜೇಶ್ ಗಟ್ಟಿ, ಜ್ಞಾನೇಶ್, ಸಂಜಯ್ ಶೆಣೈ, ಜೀವನ್ ಡಿ’ಸೋಜ, ನವೀನ್, ಚಂದ್ರಶೇಖರ್, ಸುಲೋಚನಾ, ನಿಶಾ ಮುಂತಾದವರು ಉಪಸ್ಥಿತರಿದ್ದರು.
ದೇಶ ಸೇವೆಗಾಗಿ ಪುನರ್ಸಮರ್ಪಿಸುವ ವಿಶೇಷ ದಿನ : ಡಾ|| ಚೂಂತಾರು
RELATED ARTICLES