ಕಿನ್ನಿಗೋಳಿ: ರಾಜ್ಯ ಪ್ರಶಸ್ತಿ ಪುರಸ್ಕೃತೆ, ಸಿರಿಪಾಡ್ದನದ ಮೂಲಕ ಪ್ರಸಿದ್ಧರಾಗಿದ್ದ ಗಿಡಿಗೆರೆ ರಾಮಕ್ಕ ಸೋಮವಾರ ನಿಧನರಾಗಿದ್ದಾರೆ. ಗಿಡಿಗೆರೆಯ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದರು. ಅವರಿಗೆ 102 ವರ್ಷ ವಯಸ್ಸಾಗಿತ್ತು.
ಕುಮಾರ, ಸಿರಿ, ಅಬ್ಬಗ-ದಾರಗ ಸಹಿತ ಹಲವು ದೈವಿಕ ಆಚರಣೆ ಹಾಗೂ ಶ್ರಮಿಕ ಸಂಸ್ಕೃತಿಯ ಸಂಧಿ ಪಾಡ್ದನಗಳು ಇವರಿಗೆ ಕಂಠಪಾಠ. ಇವರ ಸಿರಿ ಪಾಡ್ದನ ಎ.ವಿ. ನಾವಡರ ಸಂಪಾದಕತ್ವದಲ್ಲಿ, `ರಾಮಕ್ಕ ಮುಗ್ಗೇರ್ತಿ ಕಟ್ಟಿದ ಸಿರಿಪಾಡ್ದನ’ ಎಂದು ಗ್ರಂಥ ರೂಪದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟವಾಗಿದೆ.
ಮಂಗಳೂರು ತಾಲೂಕಿನ ವಾಮಂಜೂರಿನಲ್ಲಿ ಜನಿಸಿದ ರಾಮಕ್ಕ ತಮ್ಮ 17ನೇ ವಯಸ್ಸಿಗೆ ಕಟೀಲಿನ ಸಮೀಪದ ಗಿಡಿಗೆರೆಯ ಕಾಪಿರ ಮುಗೇರ ಎಂಬವರನ್ನು ವಿವಾಹವಾಗಿದ್ದರು. ಕೂಕ್ರ ಮುಗೇರ ಮತ್ತು ದುಗ್ಗಮ್ಮ ದಂಪತಿಯ ಪುತ್ರಿಯಾದ ಇವರಿಗೆ ತುಳು ಕವಿತೆ, ಪಾಡ್ದನ ಮತ್ತು ಸಂದಿಗಳು ತಮ್ಮ ಅಜ್ಜಿಯಿಂದ ಬಳುವಳಿಯಾಗಿ ಬಂದಿದೆ.
ವೀರರಾಣಿ ಅಬ್ಬಕ್ಕ ಪ್ರಶಸ್ತಿ, ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ, ಕಟೀಲು ದೇವಳದ ಪಾಡ್ದನ ಕೋಗಿಲೆ ಬಿರುದು ಸಿಕ್ಕಿದೆ. ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯತ್ವ ಅಲ್ಲದೆ ನೂರಾರು ಗೌರವ, ಸನ್ಮಾನಗಳು ಸಂದಿವೆ. ರಾಮಕ್ಕ ಆರು ಗಂಡು, ಒಬ್ಬ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.