ಸುಳ್ಯ: ವಿದೇಶಕ್ಕೆ ತೆರಳುವುದಾಗಿ ತಂದೆ ತಾಯಿ, ಸ್ನೇಹಿತರಿಗೆ ಸುಳ್ಳು ಹೇಳಿ, ವಿಮಾನ ನಿಲ್ದಾಣದ ವರೆಗೆ ಹೋಗಿ, ಅಲ್ಲಿಂದ ವಾಪಾಸ್ ಬಂದು ಮುಸ್ಲಿಂ ಯುವಕನೊಬ್ಬನ ಜೊತೆ ಪರಾರಿಯಾಗಿರುವ ಸಿನಿಮೀಯ ಶೈಲಿಯ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮ ಮೂಲದ ಯುವತಿ, ತನ್ನ ಇಬ್ಬರು ಸಹಪಾಠಿ ಸ್ನೇಹಿತೆಯರು ಬೆಂಗಳೂರಿನಲ್ಲಿದ್ದು, ಅವರು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ತನ್ನನ್ನು ಬೀಳ್ಕೊಡಲು ಬಂದಿರುವುದಾಗಿ ಪೋಷಕರಿಗೆ ನಂಬಿಸಿದ್ದಳು. ಅದರಂತೆ ವಿಮಾನ ನಿಲ್ದಾಣದವರೆಗೂ ಗೆಳತಿಯರ ಜೊತೆ ಯುವತಿ ಹೋಗಿದ್ದಳು. ಆಕೆ ವಿಮಾನ ನಿಲ್ದಾಣದ ಒಳಗೆ ಹೋಗುತ್ತಿದ್ದಂತೆ ಸ್ನೇಹಿತೆಯರು ಅಲ್ಲಿಂದ ಹೊರಟಿದ್ದರು ಎನ್ನಲಾಗಿದೆ. ಆದರೆ, ಅಲ್ಲಿಂದ ವಾಪಾಸ್ ಬಂದ ಯುವತಿ ಮುಸ್ಲಿಂ ಯುವಕನೊಬ್ಬನ ಜೊತೆ ವಿಮಾನ ನಿಲ್ದಾಣದಿಂದ ಬಸ್ಸು ಮೂಲಕ ಪರಾರಿಯಾಗಿದ್ದಳೆಂದು ತಿಳಿದುಬಂದಿದೆ. ಯುವತಿ ತನ್ನ ಗೆಳತಿಯರಿಗೂ ತಪ್ಪು ಮಾಹಿತಿ ನೀಡಿದ್ದು, ತನಗೆ ಅಪ್ಪ ಅಮ್ಮ ಇಲ್ಲವೆಂದೇ ಕಥೆ ಕಟ್ಟಿದ್ದಳು ಎನ್ನಲಾಗಿದೆ. ಅವರಿಂದ ಹಣದ ಸಹಾಯ ಕೂಟ ಪಡೆದಿದ್ದಳು ಎನ್ನಲಾಗಿದೆ.
ಬಸ್ಸು ನಿರ್ವಾಹಕನ ಚಾಣಾಕ್ಷತನ, ಪ್ರಕರಣ ಬಯಲಿಗೆ ಬರಲು ಕಾರಣವಾಯಿತು!
ಪೋಷಕರು ತಮ್ಮ ಮಗಳು ವಿದೇಶಕ್ಕೆ ಹೋದಳೆಂದು ನಂಬಿದ್ದರೆ, ವಿಮಾನ ನಿಲ್ದಾಣದಲ್ಲಿ ಸವಣೂರು ಮೂಲದ ಮುಸ್ಲಿಂ ಯುವಕನ ಜೊತೆ ಸೇರಿದ ಯುವತಿ, ವಿಮಾನ ನಿಲ್ದಾಣದಿಂದ ಹೊರಬಂದು ವಾಪಾಸ್ ಬಸ್ಸಿನಲ್ಲಿ ಪ್ರಯಾಣಿಸಿದ್ದಳು. ಆದರೆ ಆ ಬಸ್ಸಿನ ನಿರ್ವಾಹಕ ಅನ್ಯಕೋಮಿನ ಜೋಡಿ ಕಂಡು ಅನುಮಾನಗೊಂಡು ಆತ ಯುವತಿಯ ಫೋಟೋ ತೆಗೆದು ಹಿಂದೂ ಸಂಘಟನೆಯ ಯುವಕರಿಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ. ಅದು ಪುತ್ತೂರಿನ ಹಿಂದೂ ಸಂಘಟನೆಗಳಿಗೂ ತಲುಪಿತ್ತು.
ಸುಬ್ರಹ್ಮಣ್ಯ ಠಾಣೆ ಮೆಟ್ಟಿಲೇರಿದ ಪೋಷಕರು:
ಯುವತಿಯ ಫೋಟೋ ಹಲವು ವಾಟ್ಸಾಪ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳಲಾಗಿದ್ದು, ಫೋಟೋದಲ್ಲಿರುವ ಯುವತಿ ಕೊಲ್ಲಮೊಗ್ರಿನವಳೆಂದು ಗೊತ್ತಾಗುತ್ತಿದ್ದಂತೆ, ಆಕೆಯ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತು.
ಪೋಷಕರಿಗೆ ತಮ್ಮ ಮಗಳು ವಿದೇಶಕ್ಕೆ ತೆರಳದಿರುವುದು ಖಚಿತವಾಗುತ್ತಿದ್ದಂತೆ, ಸುಬ್ರಹ್ಮಣ್ಯ ಪೋಲಿಸ್ ಠಾಣಾಧಿಕಾರಿ ಕಾರ್ತಿಕ್ ಅವರನ್ನು ಸಂಪರ್ಕಿಸಿದ್ದು, ದೀಕ್ಷಾಳ ಮೊಬೈಲ್ ಲೊಕೇಷನ್ ಆಧಾರದಲ್ಲಿ ಆಕೆ ಬೆಂಗಳೂರಿನ ಹೊರವಲಯದಲ್ಲಿ ಇರುವ ಬಗ್ಗೆ ತಿಳಿದುಬಂದಿತ್ತು.
ಬೆಂಗಳೂರು ಹೊರವಲಯದಲ್ಲಿ ಯುವತಿ ಪತ್ತೆ:
ಈ ಸಮಯದಲ್ಲಿ ಜಾಣ್ಮೆ ಮೆರೆದ ಸಬ್ ಇನ್ಸ್ಪೆಕ್ಟರ್ ಕಾರ್ತಿಕ್ ಅವರು, ಇಲ್ಲಿಂದ ಬೆಂಗಳೂರು ದೂರವಿರುವ ಕಾರಣ ಕೂಡಲೇ ಬೆಂಗಳೂರಿನ ಪೋಲಿಸ್ ಠಾಣೆಯಲ್ಲಿ ದೂರು ನೀಡುವಂತೆ ಸಲಹೆ ನೀಡಿದ್ದು, ಅಲ್ಲಿ ದೂರು ದಾಖಲಿಸಿಕೊಳ್ಳದೇ ಇದ್ದರೆ, ತಾನೇ ಖುದ್ದಾಗಿ ಪ್ರಕರಣ ದಾಖಲಿಸಿಕೊಳ್ಳುವ ಭರವಸೆ ನೀಡಿದ್ದರು. ಆದರೆ ಬಳಿಕ ಯುವತಿ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದು, ಪೋಷಕರ ಚಿಂತೆಗೆ ಕಾರಣವಾಗಿತ್ತು.
ನಂತರ ಬೆಂಗಳೂರಿಗೆ ತೆರಳಿದ ಯುವತಿಯ ಪೋಷಕರು ಉಪ್ಪಾರಪೇಟೆ ಪೋಲಿಸ್ ಠಾಣೆಯಲ್ಲಿ ಆ. 28ರಂದು ದೂರು ನೀಡಿದ್ದರು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಪ್ಪಾರಪೇಟೆ ಪೋಲಿಸರು ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಉಪ್ಪಾರಪೇಟೆ ಪೋಲಿಸ್ ಠಾಣೆಗೆ ಕರೆತಂದಿದ್ದು, ಇಂದು ಯುವತಿಯನ್ನು ಸುಬ್ರಹ್ಮಣ್ಯಕ್ಕೆ ಕರೆತರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.