ಬೆಂಗಳೂರು: ನಾಯಿ ಹಾಗೂ ಇತರೆ ಪ್ರಾಣಿಗಳ ಮಾಂಸವನ್ನು ಜೈಪುರದಿಂದ ರೈಲಿನಲ್ಲಿ ನಗರಕ್ಕೆ ತಂದು ಹೋಟೆಲ್ಗಳಿಗೆ ಪೂರೈಸಲಾಗುತ್ತಿದೆ’ ಎಂದು ಆರೋಪಿಸಿ, ನಗರದಲ್ಲಿ ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ರಾಜಸ್ಥಾನದ ವ್ಯಕ್ತಿಯೊಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಶುಕ್ರವಾರ ಸಂಜೆ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಜೈಪುರ- ಮೈಸೂರು ಎಕ್ಸ್ಪ್ರೆಸ್ ರೈಲು ಮೂಲಕ 120 ಬಾಕ್ಸ್ಗಳಲ್ಲಿ ಅಂದಾಜು 4,500 ಕೆ.ಜಿ ಮಾಂಸ ತರಲಾಗಿತ್ತು. ಅದರಲ್ಲಿ ಕುರಿ ಮಾಂಸದ ಜತೆಗೆ ನಾಯಿ ಮಾಂಸವನ್ನೂ ಮಿಶ್ರಣ ಮಾಡಿ ತರಲಾಗಿದೆ’ ಎಂದು ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಗುಂಪೊಂದು ಪ್ರತಿಭಟನೆ ನಡೆಸಿತ್ತು.
ಸ್ಥಳಕ್ಕೆ ಬಂದಿದ್ದ ಪೊಲೀಸರು ಪರಿಶೀಲಿಸಿ, ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳನ್ನು ಕರೆಸಿದ್ದರು. ಅವರು ಮಾಂಸದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಈ ಬೆಳವಣಿಗೆ ಬೆನ್ನಲ್ಲೇ ರಾಜಸ್ಥಾನದಿಂದ ನಗರಕ್ಕೆ ಮಾಂಸ ಕಳುಹಿಸಿದ್ದ ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಮಾಂಸವನ್ನು ನಗರಕ್ಕೆ ರವಾನೆ ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಿ ನೋಟಿಸ್ ಕಳುಹಿಸಿ ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯಕ್ಕೆ ಎಫ್ಐಆರ್ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಕೆಲವೇ ದಿನಗಳಲ್ಲಿ ಆಹಾರ ಸುರಕ್ಷತೆ ಇಲಾಖೆ ವರದಿಯೂ ಬರಲಿದ್ದು, ಯಾವ ಪ್ರಾಣಿಯ ಮಾಂಸ ಎಂಬುದು ತಿಳಿಯಲಿದೆ. ಬೇರೆ ಮಾಂಸವನ್ನು ಮಿಶ್ರ ಮಾಡಿದ್ದು ಕಂಡುಬಂದರೆ ಮುಂದಿನ ತನಿಖೆ ವೇಳೆ ಆರೋಪಿಗಳ ಹೆಸರು ಸೇರಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.
ಕರ್ತವ್ಯಕ್ಕೆ ಅಡ್ಡಿ-ಪುನೀತ್ ಬಂಧನ: ನಾಯಿ ಮಾಂಸ ತಂದು ಮಾರಾಟ ಮಾಡಲಾಗುತ್ತಿದೆ ಎಂದು ತಮ್ಮ ಸಹಚರರೊಂದಿಗೆ ಪ್ರತಿಭಟನೆ ನಡೆಸಿದ್ದ ಪುನೀತ್ ಕೆರೆಹಳ್ಳಿ ಅವರನ್ನು ಕಾಟನ್ಪೇಟೆ ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದರು.
ಗಲಾಟೆ ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಯತ್ನಿಸಿದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಲಾಗಿದೆ.
ಪೊಲೀಸರ ಮೇಲೆಯೇ ಹಲ್ಲೆ ಹಾಗೂ ಬೆದರಿಕೆ ಹಾಕಿದ ಆರೋಪದ ಅಡಿ ಬಂಧಿಸಿ, ಠಾಣಾ ಜಾಮೀನಿನಡಿ ಬಿಡುಗಡೆ ಮಾಡಲಾಗಿದೆ. ಅಸ್ವಸ್ಥಗೊಂಡು ಕುಸಿದುಬಿದ್ದಿದ್ದ ಪುನೀತ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ನಾಯಿಮಾಂಸ ಸಾಗಣೆ ಆರೋಪದ ಪ್ರಕರಣ ಸಂಬಂಧ ಮಾಂಸದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು ವರದಿ ಬರಲು ಏಳು ದಿನ ಬೇಕಾಗುತ್ತದೆ. ಎಲ್ಲಿಂದ ಮಾಂಸ ತರಲಾಗುತ್ತಿತ್ತು ಎಂಬುದರ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
‘ನಗರಕ್ಕೆ ರೈಲುಗಳಲ್ಲಿ ಕುರಿ ಇತರೆ ಪ್ರಾಣಿಗಳ ಮಾಂಸ ಸರಬರಾಜು ಕುರಿತು ಪೊಲೀಸ್ ಇಲಾಖೆ ಜತೆಗೂಡಿ ತಪಾಸಣೆ ಮಾಡಲಾಗಿದೆ. ಮಾಂಸದ ಮಾದರಿಯನ್ನು ಆಹಾರ ಪ್ರಯೋಗಾಲಯಕ್ಕೆ ವಿಶ್ಲೇಷಣೆಗೆ ಕಳುಹಿಸಲಾಗಿದೆ’ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಕೆ.ಶ್ರೀನಿವಾಸ್ ತಿಳಿಸಿದ್ದಾರೆ. ‘ಪಾರ್ಸೆಲ್ಗಳನ್ನು ಕಳುಹಿಸಿದವರು ಸ್ವೀಕರಿಸಿದವರ ಎಫ್ಎಸ್ಎಸ್ಎಐ ಪರವಾನಗಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಲೋಪ ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.