ತಿರುವನಂತಪುರಂ: ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್ನಿಂದ ಗೆದ್ದು ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೂತನ ಸರ್ಕಾರದಲ್ಲಿ ಸಚಿವರಾಗಿ ಸ್ಥಾನ ಪಡೆದಿರುವ ನಟ ಸುರೇಶ್ ಗೋಪಿ ಅವರ ಹೇಳಿಕೆಯೊಂದು ಈಗ ಭಾರೀ ಸುದ್ದಿಯಾಗಿದೆ.
ಕಾಂಗ್ರೆಸ್ ನಾಯಕಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ʻಭಾರತ ಮಾತೆ (ಮದರ್ ಇಂಡಿಯಾ)ʼ ಎಂದು ಕರೆಯುವ ಮೂಲಕ ಸುರೇಶ್ ಗೋಪಿ ಅಚ್ಚರಿ ಮೂಡಿಸಿದ್ದಾರೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಕೆ. ಕರುಣಾಕರಣ್ ಅವರನ್ನು ಧೈರ್ಯಶಾಲಿ ಆಡಳಿತಗಾರ ಎಂದಿದ್ದಾರೆ.
ಪುಂಕುನ್ನಂನಲ್ಲಿರುವ ಕರುಣಾಕರನ್ ಅವರ ಸ್ಮಾರಕ ಮುರಳಿ ಮಂದಿರಂಗೆ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕರುಣಾಕರನ್ ಸ್ಮಾರಕ ಭೇಟಿಗೆ ಯಾವುದೇ ರಾಜಕೀಯ ಅರ್ಥ ಕಲ್ಪಿಸಬೇಡಿ ಎಂದ ಅವರು, ತಮ್ಮ ಗುರುಗಳಿಗೆ ಗೌರವ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ ಎಂದರು. ಕರುಣಾಕರನ್ ಅವರನ್ನು ಕೇರಳದ ಕಾಂಗ್ರೆಸ್ ಪಕ್ಷದ ಪಿತಾಮಹ ಎಂದೂ ಅವರು ಬಣ್ಣಿಸಿದರು.
ಆದರೆ ಕುತೂಹಲ ಏನೆಂದರೆ, ಕರುಣಾಕರನ್ ಅವರ ಪುತ್ರ ಕೆ. ಮುರಳೀಧರನ್ ಅವರನ್ನು ಸೋಲಿಸಿ ಸುರೇಶ್ ಗೋಪಿ ತ್ರಿಶೂರ್ನಲ್ಲಿ ಗೆದ್ದಿದ್ದಾರೆ. ಕೆ. ಮುರಳೀಧರನ್ ಮೂರನೇ ಸ್ಥಾನ ಗಳಿಸಿದ್ದರು.