ನ್ಯೂಯಾರ್ಕ್ನ ಮೆಲ್ವಿಲ್ಲೆನಲ್ಲಿರುವ ಬಾಪ್ಸ್ ಶ್ರೀ ಸ್ವಾಮಿ ನಾರಾಯಣ ಮಂದಿರದ ಮೇಲೆ ಕಿಡಿಗೇಡಿಗಳು ದಾಳಿ ಮಾಡಿ ವಿಧ್ವಂಸಕ ಕೃತ್ಯ ಎಸಗಿದ್ದಾರೆ. ಕಿಡಿಗೇಡಿಗಳ ಈ ಕೃತ್ಯಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಇಂಡಿಯನ್ ನ್ಯೂಯಾರ್ಕ್, ಇದೊಂದು ಅತ್ಯಂತ ಹೀನವಾದ ಕೃತ್ಯ. ಬಾಪ್ಸ್ ಶ್ರೀಸ್ವಾಮಿ ನಾರಾಯಣ ಮಂದಿರದಲ್ಲಿನ ವಿಧ್ವಂಸಕ ಕೃತ್ಯವನ್ನು ಯಾರೂ ಕೂಡ ಒಪ್ಪಲಾರರು. ಹಿಂದೂ ಸಮುದಾಯದೊಂದಿಗೆ ಇಂಡಿಯನ್ ನ್ಯೂಯಾರ್ಕ್ ಈಗಾಗಲೇ ಸಂಪರ್ಕವನ್ನು ಹೊಂದಿದೆ. ನಡೆದ ದುರ್ಘಟನೆಯನ್ನು ಅಮೆರಿಕಾದ ಕಾನೂನು ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಕೂಡಲೇ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇನ್ನು ಬಾಪ್ಸ್ ಸ್ವಾಮಿ ನಾರಾಯಣ ಸಂಸ್ಥೆಯೂ ಕೂಡ ಮಂದಿರ ಧ್ವಂಸದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಈ ಒಂದು ಘಟನೆಯಿಂದ ಅತ್ಯಂತ ನೋವಾಗಿದೆ. ಇದು ಹಿಂದೂಗಳ ಮೇಲಿನ ದ್ವೇಷವನ್ನು ಸಾರಿ ಹೇಳುತ್ತಿದೆ. ಇಂದು ಸ್ಥಳೀಯರು, ರಾಜ್ಯ ಹಾಗೂ ದೇಶದಲ್ಲಿರುವ ಸಮುದಾಯದವರೆಲ್ಲಾ ಸೇರಿ ಶಾಂತಿ ಗೌರವ ಹಾಗೂ ಒಗ್ಗಟ್ಟುತನದ ಸಂದೇಶವನ್ನ ಸಾರಿದ್ದೇವೆ ಎಂದು ಹೇಳಿದೆ.
ನ್ಯೂಯಾರ್ಕ್ನಲ್ಲಿ ಬಾಪ್ಸ್ ಶ್ರೀ ಸ್ವಾಮಿ ನಾರಾಯಣ ಮಂದಿರ ಧ್ವಂಸವನ್ನು ಇಡೀ ಅಮೆರಿಕಾದಲ್ಲಿರುವ ಹಿಂದೂಗಳು ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ. ಹಿಂದೂ ಅಮೆರಿಕನ್ ಫೌಂಡೇಶನ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು. ಟ್ವೀಟ್ನಲ್ಲಿ ಬಾಪ್ಸ್ ಶ್ರೀ ಸ್ವಾಮಿ ನಾರಾಯಣ ಮಂದಿರದ ಗೋಡೆ ಹಾಗೂ ರಸ್ತೆಯ ಮೇಲೆ ಕಿಡಿಗೇಡಿಗಳು ಬರೆದ ಭಾರತ ವಿರೋಧಿ ಬರಹಗಳ ವಿಡಿಯೋವನ್ನು ಪೋಸ್ಟ್ ಮಾಡಿದೆ.
ಕೆಲವು ದಿನಗಳ ಹಿಂದಷ್ಟೇ ಖಲಿಸ್ತಾನ್ ಉಗ್ರ ಗುರುಪಂತ್ವ ಸಿಂಗ್ ಪನ್ನು ಹಿಂದೂ ದೇವಾಲಯ ಹಾಗೂ ಸಂಸ್ಥೆಗಳಿಗೆ ಬೆದರಿಕೆಯ ವಿಡಿಯೋಗಳನ್ನು ಹಂಚಿಕೊಂಡಿದ್ದ. ಸದ್ಯ ನ್ಯೂಯಾರ್ಕ್ನಲ್ಲಿ ಸ್ವಾಮಿ ನಾರಾಯಣ ದೇವಾಲಯದ ಮೇಲೆ ನಡೆದ ದಾಳಿಯೂ ಕೂಡ ಕ್ಯಾಲಿಫೋರ್ನಿಯಾ ಹಾಗೂ ಕೆನಡಾದಲ್ಲಿ ನಡೆದ ಮಾದರಿಯಲ್ಲಿಯೇ ನಡೆದಿದೆ. ಇದರ ಹಿಂದೆ ಖಲಿಸ್ತಾನಿ ಉಗ್ರರ ಕೈವಾಡವಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವಿಡಿಯೋ ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ…