Saturday, May 24, 2025
Homeಧಾರ್ಮಿಕದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ನಾಗ ತನುತರ್ಪಣ ಮಂಡಲ ಸೇವೆ ಸಂಪನ್ನ

ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ನಾಗ ತನುತರ್ಪಣ ಮಂಡಲ ಸೇವೆ ಸಂಪನ್ನ

ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಶ್ರೀ ನಾಗದೇವರ ಸಾನಿಧ್ಯದಲ್ಲಿ ಬಹು ಫಲಪ್ರದವಾದ ನಾಗ ತನುತರ್ಪಣ ಮಂಡಲ ಸೇವೆಯು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರ ಮಾರ್ಗದರ್ಶನದಲ್ಲಿ ಸೇವಾದಾರರ ಸಮಕ್ಷಮದಲ್ಲಿ ಮಂಗಳವಾರ ಅಭೂತಪೂರ್ವವಾಗಿ ಸಂಪನ್ನಗೊಂಡಿತು.
ನಾಗದೋಷ ಪರಿಹಾರಾರ್ಥವಾಗಿ ಸರ್ವ ಪ್ರಾಯಶ್ಚಿತ ಪೂರ್ವಕ ಕ್ಷೇತ್ರದ ನಾಗದೇವರಿಂದ ಅನುಗ್ರಹಿತ ಭಕ್ತ ಕುಟುಂಬದವರಿಂದ ಸಮರ್ಪಿಸಲ್ಪಟ್ಟ ಈ ಮಹಾನ್ ಸೇವೆಯನ್ನು ಗಣೇಶ ಸರಳಾಯರು ವಿಧಿವಿಧಾನ ಪೂರ್ವಕವಾಗಿ ವಿಜೃಂಭಣೆಯಿಂದ ನೆರವೇರಿಸಿದರು.
ಧಾರ್ಮಿಕ ಪ್ರಕ್ರಿಯೆ ಅಂಗವಾಗಿ ಬೆಳಗ್ಗೆ ನವಕ ಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಪವಮಾನ ಸೂಕ್ತ ಹೋಮ, ಕಲಶಾಭಿಷೇಕ ನೆರವೇರಿತು. ದೇವಿಯ ಮಹಾಪೂಜೆಯನ್ನು ಅನೀಶ್ ಆಚಾರ್ಯ ನೆರವೇರಿಸಿದರು. ಪೂಜಾ ವಿಧಿವಿಧಾನಗಳಲ್ಲಿ ಸ್ವಸ್ತಿಕ್ ಆಚಾರ್ಯ, ನಾಗಶಯನ, ನಾಗರಾಜ ಭಟ್ ಪೆರಂಪಳ್ಳಿ, ಶ್ರೀನಿವಾಸ ಭಟ್ ಮೈಸೂರು ಸಹಕರಿಸಿದ್ದರು.
ಪಂಚವರ್ಣಾತ್ಮಕವಾದ ಆಕರ್ಷಕ ಬೃಹತ್ ನಾಗ ತನುತರ್ಪಣ ಮಂಡಲವನ್ನು ಅಜೆಕಾರು ಮುರಳೀಧರ ಟ್ ಅವರು ಆದರ್ಶ ಸಾಮಗ, ಪ್ರಸನ್ನ ಮಾರ್ಪಳ್ಳಿ, ವಿಜಯೇಂದ್ರ ಮೇಲಂಟ ಅವರ ಸಹಕಾರದಿಂದ ಅದ್ಭುತವಾಗಿ ರಚಿಸಿದ್ದರು. ಸಂಜೆ ನಾಗ ಸಾನಿಧ್ಯದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ದೀಪ ಪ್ರಜ್ವಲಿಸಿ ಪೂಜೆಗೆ ಚಾಲನೆ ನೀಡಿದರು.
ಅನಂತರ ಹಾಲಿಟ್ಟು ಸೇವೆ, ಆಶ್ಲೇಷಾಬಲಿ ಸಹಿತ ತನುತರ್ಪಣ ಮಂಡಲ ಸೇವೆ ಸಂಪನ್ನಗೊಂಡಿತು. ಅನುಕ್ರಮಣಿಕೆಯನ್ನು ಡಾ. ಶ್ರೀವತ್ಸ ಉಪಾಧ್ಯಾಯ, ನಾಗ ಸಂದರ್ಶನವನ್ನು ಕಲ್ಲಂಗಳ ರಾಮಚಂದ್ರ ಕುಂಜಿತ್ತಾಯ ನೆರವೇರಿಸಿದರು. ನಾಗೇಂದ್ರ ಕುಡುಪು ಮತ್ತು ಬಳಗದವರಿಂದ ಚೆಂಡೆ ಹಾಗೂ ಉಡಿಕೆ ನಾದ, ಮುರಳೀಧರ ಮುದ್ರಾಡಿ ಮತ್ತು ತಂಡದವರಿಂದ ನಾಗಸ್ವರ ವಾದನ ಸಮರ್ಪಿಸಲ್ಪಟ್ಟಿತು.
ಬ್ರಾಹ್ಮಣ, ಸುವಾಸಿನಿ, ವಟು ಆರಾಧನೆ, ದಂಪತಿ, ಕನ್ನಿಕಾ, ಆಚಾರ್ಯ ಪೂಜೆ ಇತ್ಯಾದಿ ಪೂಜೆ ಮತ್ತು ಆರಾಧನೆಗಳು ಜರಗಿತು. ಈ ಪೂಜೆಯಲ್ಲಿ ನಾಗ ದೇವರು ಶ್ರೀದೇವಿಯನ್ನು ಭೇಟಿ ಮಾಡುವ ಅವಿಸ್ಮರಣೀಯ ಕ್ಷಣ ರೋಮಾಂಚನಗೊಳಿಸುವಂತಿತ್ತು. ಮಧ್ಯಾಹ್ನ ಹಾಗೂ ರಾತ್ರಿ ನಡೆದ ಅನ್ನಸಂತರ್ಪಣೆಯಲ್ಲಿ ಸಾಕಷ್ಟು ಸಂಖ್ಯೆೆಯಲ್ಲಿ ಭಕ್ತರು ಪ್ರಸಾದ ಸ್ವೀಕರಿಸಿ ಧನ್ಯರಾದರು ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.

RELATED ARTICLES
- Advertisment -
Google search engine

Most Popular