ಏ.14ರಂದು ರಾಜಾಂಗಣದಲ್ಲಿ ಗೌರವಾರ್ಪಣೆ : ಶ್ರೀಕೃಷ್ಣನಿಗೆ ಸುವರ್ಣ ನಾಣ್ಯ ಅಭಿಷೇಕ
ಉಡುಪಿ: ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸನ್ಯಾಸ ಸ್ವೀಕಾರ ಸುವರ್ಣ ಸಂಭ್ರಮ ಅಂಗವಾಗಿ ಏ.14ರಂದು ಸೌರ ಯುಗಾದಿಯ ಪರ್ವ ಕಾಲದಲ್ಲಿ ಶ್ರೀಕೃಷ್ಣನಿಗೆ ಸುವರ್ಣ ನಾಣ್ಯಗಳ ಅಭಿಷೇಕ, ಪುತ್ತಿಗೆ ಶ್ರೀಗಳ ಮೆರವಣಿಗೆ, ಗೌರವಾರ್ಪಣೆ ಶಿಷ್ಯಂದಿರು ಹಾಗೂ ಅಭಿಮಾನಿ ವೃಂದದ ವತಿಯಿಂದ ನಡೆಯಲಿದೆ.
ತಮ್ಮ ನಾಲ್ಕನೇ ಪರ್ಯಾಯದ ಮಹತ್ವಾಕಾಂಕ್ಷೆಯ ಯೋಜನೆಯಾದ ಕೋಟಿ ಗೀತಾ ಲೇಖನ ಯಜ್ಞದ ಸ್ಮರಣಾರ್ಥ ಶ್ರೀಕೃಷ್ಣನಿಗೆ ಅಪೂರ್ವ ಪಾರ್ಥಸಾರಥಿ ಸುವರ್ಣ ರಥವನ್ನು 18 ಕೋಟಿ ರೂ. ವೆಚ್ಚದಲ್ಲಿ ಅರ್ಪಿಸಲು ಉದ್ದೇಶಿಸಿದ್ದು, ಯೋಜನೆಯ ಪ್ರಾರಂಭ ಮುಹೂರ್ತ ಈ ಸಂದರ್ಭ ಜರುಗಲಿದೆ.
ರಾಜಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಹೆ ವಿವಿ ಸಹಕುಲಾಧಿಪತಿ ಹಾಗೂ ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್, ಎಲ್ ಐಸಿ ಉಡುಪಿ ವಿಭಾಗೀಯ ಕಚೇರಿಯ ಹಿರಿಯ ವಿಭಾಗೀಯ ವ್ಯವಸ್ಥಾಪಕ ರಾಜೇಶ್ ಮುಧೋಳ್, ಯುಪಿಸಿಎಲ್ ಉಡುಪಿ ಪ್ರಾದೇಶಿಕ ನಿರ್ದೇಶಕ ಕಿಶೋರ್ ಆಳ್ವ ಕರಾವಳಿ ಗ್ರೂಪ್ ಆಫ್ ಕಾಲೇಜ್ ಇದರ ನಿರ್ದೇಶಕ ಗಣೇಶ್ ರಾವ್, ಉಡುಪಿ ನಂದಿಕೂರಿನ ಪ್ರಾಜ್ ಇಂಡಸ್ಟ್ರೀಸ್ ಇದರ ಅಶೋಕ್ ಶೆಟ್ಟಿ, ಕಳತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೇಂಜ ಶ್ರೀಧರ ತಂತ್ರಿ, ಬ್ರಹ್ಮಾವರ ರೋಟರಿ ನಿಯೋಜಿತ ಗವರ್ನರ್ ಬಿ.ಎಂ.ಭಟ್, ಆ್ಯಕ್ಸಿಸ್ ಬ್ಯಾಂಕ್ ಉಪಾಧ್ಯಕ್ಷ ಸುರೇಶ್ ರಾವ್, ಬ್ರಹ್ಮಾವರ ಜಿ.ಎಂ.ವಿದ್ಯಾನಿಕೇತನದ ಪ್ರಕಾಶ್ ಚಂದ್ರ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದಾರೆ.
ಸಮಾಜದ ಗಣ್ಯರಿಂದ 108 ಚಿನ್ನದ ನಾಣ್ಯಗಳ ಸಮರ್ಪಣೆ, ಪುತ್ತಿಗೆ ಶ್ರೀಗಳಿಗೆ ಪುಷ್ಪಾರ್ಚನೆ ನೆರವೇರಲಿದೆ. ಸೌರಮಾನ ಯುಗಾದಿಯ ನೂತನ ಕ್ರೋಧಿ ಸಂವತ್ಸರದ ಶುಭ ಸಂದೇಶವನ್ನು ಶ್ರೀಗಳು ನೀಡಲಿದ್ದಾರೆ. ಪಾರ್ಥಸಾರಥಿ ಸುವರ್ಣ ರಥಕ್ಕೆ ಚಿನ್ನದ ನಾಣ್ಯ ಸಮರ್ಪಿಸಲಿಚ್ಛಿಸುವವರು ಪುತ್ತಿಗೆ ಮಠವನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.