ತರೀಕೆರೆ: ತಾಲ್ಲೂಕಿನ ಲಕ್ಕವಳ್ಳಿ ಹೋಬಳಿ ಕರಕುಚ್ಚಿ ಎ ಕಾಲೋನಿ ಗ್ರಾಮದ ಚರಣ್ (25), ಪತ್ನಿ ಮೇಘನಾ (18) ಅವರನ್ನು ಮಚ್ಚಿನಿಂದ ಹೊಡೆದಿದ್ದು, ಮೇಘನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕುಟುಂಬ ಕಲಹದಿಂದ ಮೇಘನಾ ಶಂಕರಘಟ್ಟದ ಅಜ್ಜಿಯ ಮನೆಯಲ್ಲಿ ವಾಸವಿದ್ದರು. ಗ್ರಾಮದಲ್ಲಿ ಮಂಗಳವಾರ ಮುಳ್ಳಕಟ್ಟಮ್ಮ ದೇವಿಯ ಜಾತ್ರಾ ಮಹೋತ್ಸವವಿದ್ದ ಕಾರಣ ಸೋಮವಾರ ಬೆಳಿಗ್ಗೆ ಗ್ರಾಮಕ್ಕೆ ಬಂದಿದ್ದರು.
ಇವರ ಮನೆಯ ಸಮೀಪವಿರುವ ಭದ್ರಾ ಉಪ ಕಾಲುವೆ ಬಳಿ ಬಟ್ಟೆ ತೊಳೆದುಕೊಂಡು ಬರಲು ಸ್ಥಳೀಯ ಮಹಿಳೆಯರೊಂದಿಗೆ ತೆರಳಿದ್ದರು. ಪತಿ ಚರಣ್ ಅಲ್ಲಿಗೆ ಬಂದು ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾಗಿ ಮೂಲಗಳು ತಿಳಿಸಿವೆ. ಚರಣ್ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಿದ್ದು, ಇತ್ತೀಚಿಗೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.
ಮೇಘನಾಳ ಮೃತದೇಹವವನ್ನು ಮರಣೋತ್ತರ ಪರೀಕ್ಷೆಗಾಗಿ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ, ಮೇಘನಾ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ, ವಾಹನದಿಂದ ಮೃತದೇಹ ಕೆಳಗಿಳಿಸಿ ಆರೋಪಿ ಚರಣ್ನ ಮನೆಯ ಒಳಗೆ ತೆದುಕೊಂಡು ಹೋಗಿ ಮೃತ ಮೇಘನಾ ಇದೇ ಕುಟಂಬ ಸದಸ್ಯೆಯಾಗಿರುವುದರಿಂದ ಇವಳ ಗಂಡ ಹಾಗೂ ಆತನ ಕುಟುಂಬ ಸದಸ್ಯರು ಅವರ ಜಮೀನಿನಲ್ಲಿಯೇ ಶವಸಂಸ್ಕಾರ ಮಾಡಲಿ’ ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಡಿವೈಎಸ್ಪಿ ಹಾಲಮೂರ್ತಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು ಮರಣೋತ್ತರ ಪರೀಕ್ಷೆ ನಂತರ ಮೃತದೇಹ ಹಸ್ತಾಂತರಿಸುವುದಾಗಿ ಮನವೊಲಿಸಿದರು. ಆರೋಪಿ ಚರಣ್ ಠಾಣೆಗೆ ಬಂದು ಶರಣಾಗಿದ್ದಾನೆ.