ಜಮ್ಮು ಮತ್ತು ಕಾಶ್ಮೀರದಲ್ಲಿ ಪದೇ ಪದೇ ಉಗ್ರರ ದಾಳಿ ನಡೆಯುತ್ತಲೇ ಇವೆ. ಎರಡು ದಿನಗಳ ಹಿಂದೆ ಜಮ್ಮುವಿನ ರಿಯಾಸಿಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಉಗ್ರರ ಗುಂಡೇಟಿನಿಂದ ಬಸ್ ಕಂದಕಕ್ಕೆ ಬಿದ್ದು 9 ಪ್ರಯಾಣಿಕರು ಸಾವನ್ನಪ್ಪಿದ್ದರು. ಈ ದುಷ್ಟರ ಸೊಕ್ಕಡಗಿಸಬೇಕೆಂದು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಭಾರತೀಯ ಸೇನೆಯ ಸೈನಿಕರು ನಿನ್ನೆ ತಡರಾತ್ರಿ ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆ ಕಥುವಾದಲ್ಲಿ ಎನ್ಕೌಂಟರ್ ನಡೆಸಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಗುಂಡಿನ ಚಕಮಕಿಯಲ್ಲಿ ಐವರು ಯೋಧರು ಮತ್ತು ಓರ್ವ ವಿಶೇಷ ಪೊಲೀಸ್ ಅಧಿಕಾರಿಯೂ ಗಾಯಗೊಂಡಿದ್ದಾರೆ. ನಮ್ಮ ಹೆಮ್ಮೆಯ ಸೇನೆ ಉಗ್ರರನ್ನು ಹೊಡೆದುರುಳಿಸಿದ ವಿಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಸಲ್ವಾನ್ ಎಂಬವರು ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಈ ಭಯೋತ್ಪಾದಕರನ್ನು ಸ್ವರ್ಗಕ್ಕೆ ಕಳುಹಿಸಿದ ಭಾರತೀಯ ಸೇನೆಗೆ ವೀರ ಯೋಧರಿಗೆ ನಮನಗಳು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಎರಡು ದಿನಗಳ ಹಿಂದೆ ರಿಯಾಸಿಯಲ್ಲಿ ಬಸ್ ಮೇಲೆ ದಾಳಿ ನಡೆಸಿದ ಉಗ್ರರನ್ನು ಭಾರತೀಯ ಸೇನೆಯ ವೀರ ಯೋಧರು ಹೊಡೆದುರುಳಿಸಿದ ದೃಶ್ಯವನ್ನು ಕಾಣಬಹುದು. ನಿನ್ನೆ ತಡರಾತ್ರಿ ಜಮ್ಮು ಕಾಶ್ಮೀರದ ಕಥುವಾದಲ್ಲಿ ಯೋಧರು ಎನ್ಕೌಂಟರ್ ನಡೆಸಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ. ಜೊತೆಗೆ ಒಬ್ಬ ಉಗ್ರನನ್ನು ಹಗ್ಗದಲ್ಲಿ ಕಟ್ಟಿ ಎಳೆದೊಯ್ದಿದಿದ್ದಾರೆ.