ಜ್ಞಾನಿ ಮತ್ತು ಜಿಜ್ಞಾಸು ಹತ್ತಿರ ಕುಳಿತು ಬದುಕಿನ ನಿಗೂಢತೆಯ ಬಗ್ಗೆ ಮಾತನಾಡುವುದೇ ಉಪನಿಷತ್ತು. ಅಲ್ಲಿ ಮೂರನೆಯವರು ಬೇಕಾಗಿಲ್ಲ. ಇನ್ನೊಬ್ಬರ ಬಗ್ಗೆಯಾಗಲೀ, ಲೋಕದ ಕುರಿತಾಗಲೀ, ತಮಗೆ ಗೊತ್ತಿರುವ ವಿಷಯಗಳ ಬಗ್ಗೆಯಾಗಲೀ ಅವರು ಮಾತನಾಡುವುದಿಲ್ಲ. ಆಂತರಿಕವಾದ ಅಂತರಂಗಕ್ಕೆ ಸಂಬAಧಿಸಿದ ವ್ಯಕ್ತಿತ್ವದ ಆಳಕ್ಕೆ ಸಂಬAಧಿಸಿದ ರಹಸ್ಯವೇ ಅವರ ಮಾತಿಗೆ ಮೂಲವಾಗಿದೆ ಎಂಬುದಾಗಿ ಖ್ಯಾತ ಚಿಂತಕರೂ ವಿದ್ವಾಂಸರೂ ಆಗಿರುವ ಶ್ರೀ ಲಕ್ಷ್ಮೀ ಶ ತೋಳ್ಪಾಡಿಯವರು ಇಲ್ಲಿ ಮಾತನಾಡುತ್ತಾ ತಿಳಿಸಿದರು.
ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಇವುಗಳ ಸಹಯೋಗದಲ್ಲಿ ಡಿಸೆಂಬರ್ ೨೧ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ‘ಉತ್ಸವ’ ಸಭಾಂಗಣದಲ್ಲಿ ೨೦೨೪ರ ಹನ್ನೊಂದು ತಿಂಗಳಲ್ಲಿ ನಡೆದ ಉಪನಿಷತ್ತುಗಳ ಕುರಿತಾದ ಉಪನ್ಯಾಸಗಳ ಸಮಾರೋಪ ಸಮಾರಂಭದ ಮುಖ್ಯ ಉಪನ್ಯಾಸಕಾರರಾಗಿ ಅವರು ಮಾತನಾಡಿದರು.
ಸಾವಿರಾರು ವರ್ಷಗಳ ಹಿಂದೆ ಇಂದಿನ ಸಿರಿವಂತಿಕೆಯ ಸೌಲಭ್ಯಗಳಿಲ್ಲದ ಕಾಲದಲ್ಲಿಯೂ ಜೀವನವನ್ನು ಅರ್ಥಮಾಡಿಕೊಳ್ಳುವ ಬಗೆ ಮತ್ತು ಒಳಗಿನ ಒಂದು ಸಂವೇದನಾಶೀಲತೆಯ ರಹಸ್ಯ ಉಪನಿಷತ್ತಿನಲ್ಲಿ ಅಡಗಿದೆ ಎಂಬುದನ್ನು ಋಷಿಮುನಿಗಳು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಆದರೆ ಪ್ರಚಂಡವಾದ ಜೀವನ ಲಾಲಸೆ ನಮ್ಮನ್ನಾವರಿಸಿರುವುದರಿಂದ, ಮನುಷ್ಯನೂ ದೇವರ ಅಂಶವೇ ಆಗಿರುವುದು ಹೌದಾದರೂ ಈ ಸೂಕ್ಷö್ಮವನ್ನು ಅರಿತುಕೊಳ್ಳುವಲ್ಲಿ ನಾವು ಸೋಲುತ್ತಿದ್ದೇವೆ. ನಮ್ಮೊಳಗಿರುವ ದೇವರಿಗೆ ನಮಗೆ ನಾವೇ ಅನ್ಯಾಯ ಮಾಡಿಕೊಳ್ಳುತ್ತಿದ್ದೇವೆ. ಇದಕ್ಕಾಗಿಯೇ ತೋರಿಕೆಯನ್ನು ತೊರೆದು ನಿನ್ನನ್ನು ನೀನು ತಿಳಿ ಅನ್ನುತ್ತದೆ ಉಪನಿಷತ್ತು ಎಂದರು.
ಡಾ.ನಾ.ಮೊಗಸಾಲೆ, ಎಸ್. ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ, ಏರ್ವೈಸ್ ಮಾರ್ಷೆಲ್ ರಮೇಶ್ ಕಾರ್ಣಿಕ್ ಅ.ಭಾ.ಸಾ.ಪ.ದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ನಾರಾಯಣ ಶೇವಿರೆ, ಹರಿಹರಪುರ ಪ್ರಭೋದಿನಿ ಗುರುಕುಲದ ಸಂಚಾಲಕರಾದ ಕೃಷ್ಣ ಶಾಸ್ತ್ರಿ ಆರೆಸ್ಸೆಸ್ ತಾಲೂಕು ಸಂಘಚಾಲಕರಾದ ರತ್ನಾಕರ ಹೆಬ್ಬಾರ್ ಮುಂತಾದವರು ಉಪಸ್ಥಿತರಿದ್ದರು. ಕುಮಾರಿ ಶಾರ್ವರಿಯವರು ಪ್ರಾರ್ಥಿಸಿ, ಶ್ರೀಮತಿ ಮಾಲತಿ ವಸಂತ ನಿರೂಪಿಸಿದರು. ಸುಧಾಕರ್ ಶ್ಯಾನುಭೋಗ್ ಅತಿಥಿಗಳನ್ನು ಪರಿಚಯಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಮಾಲತಿ ಜಿ ಪ್ರಭು ವಂದಿಸಿದರು.
ಜ್ಞಾನಿ ಮತ್ತು ಜಿಜ್ಞಾಸುವಿನ ಸಂಭಾಷಣೆಗಳೇ ಉಪನಿಷತ್ತುಗಳು
RELATED ARTICLES