ಮಂಗಳೂರು: ಮುಂಗಾರು ಪೂರ್ವ ಮಳೆ ಭರ್ಜರಿಯಾಗಿ ಸುರಿಯುತ್ತಿರುವುದರಿಂದ ತುಂಬೆ ವೆಂಟೆಡ್ ಡ್ಯಾಂನಲ್್ಲಿ ಮಂಗಳವಾರ ನೀರಿನ ಮಟ್ಟ ಏರಿಕೆ ಕಂಡಿದೆ. ಅಣೆಕಟ್ಟಿನಲ್ಲಿ 5.5 ಮೀಟರ್ ಗೆ ಏರಿಕೆಯಾಗಿರುವುದರಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಯಿತು. ತುಂಬೆ ಅಣೆಕಟ್ಟಿನಲ್ಲಿ ಸಾಕಷ್ಟು ನೀರು ಸಂಗ್ರಹವಾಗಿರುವುದರಿಂದ ನಗರದಲ್ಲಿ ನೀರಿನ ಕೊರತೆಯಿಂದ ಜಾರಿಯಾಗಿದ್ದ ನೀರು ರೇಶನಿಂಗ್ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ.
ಕುಡಿಯುವ ನೀರಿನ ತೀವ್ರ ಅಭಾವವಿದ್ದುದರಿಂದ ಏ.4ರಿಂದ ನೀರಿನ ರೇಶನಿಂಗ್ ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಇದರಿಂದ ನಗರಕ್ಕೆ ದಿನಬಿಟ್ಟು ದಿನ ನೀರು ಪೂರೈಕೆಯಾಗುತ್ತಿತ್ತು.
ಸಾಮಾನ್ಯವಾಗಿ ಜೂನ್ ನಲ್ಲಿ ನೀರು ತುಂಬಿದ ಬಳಿಕ ಗೇಟ್ ತೆರೆಯಲಾಗುತ್ತದೆ. ಆದರೆ ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದ ಅಣೆಕಟ್ಟು ತುಂಬಿರುವ ಹಿನ್ನೆಲೆಯಲ್ಲಿ ಗೇಟ್ ತೆರೆಯಲಾಗಿದೆ.