ಮಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ತಿಗಣೆ ಕಡಿತದಿಂದ ಅನಾರೋಗ್ಯಕ್ಕೀಡಾದ ಚಿತ್ರನಟ ಹಾಗೂ ಕನ್ನಡ ಸೀರಿಯಲ್ ಕಲಾವಿದ ಶೋಭರಾಜ್ ಅವರ ಪತ್ನಿ ದೀಪಿಕಾ ಸುವರ್ಣ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯ ಆಯೋಗ 1ಲಕ್ಷ ರೂ ಪರಿಹಾರ ನೀಡಲು ಖಾಸಗಿ ಕಂಪೆನಿಗೆ ಆದೇಶಿಸಿದೆ.
2022ರ ಆಗಸ್ಟ್ 16ರಂದು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಲು ದೀಪಿಕಾ ಸುವರ್ಣ ಸೀ ಬೆಡ್ ಕಂಪನಿಯ ಸ್ಲೀಪರ್ ಬಸ್ನಲ್ಲಿ ಟಿಕೇಟ್ ಬುಕ್ ಮಾಡಿದ್ದರು. ರೆಡ್ ಬಸ್ ಆನ್ಲೈನ್ ಆಫ್ನಲ್ಲಿ ಬಸ್ ಟಿಕೆಟ್ ಮಾಡಿದ್ದಾಗಲೇ ಬಸ್ ಸುವ್ಯವಸ್ಥಿತವಾಗಿ ಇದೆಯೇ ಎಂದು ವಿಚಾರಿಸಿ ಕೇಳಿ ತಿಳಿದುಕೊಂಡಿದ್ದರು. ಸೀ ಬರ್ಡ್ ಬಸ್ನಲ್ಲಿ ಉತ್ತಮ ಸೌಲಭ್ಯವಿದೆ ಎಂದು ರೆಡ್ ಬಸ್ ಸಿಬ್ಬಂದಿ ತಿಳಿಸಿದ್ದರು.
ಆದರೆ ಬಸ್ನಲ್ಲಿ ಪ್ರಯಾಣ ಆರಂಭಿಸಿದ ಕೆಲ ಹೊತ್ತಿನಲ್ಲಿ ತಿಗಣೆ ಕಾಟ ಶುರುವಾಗಿದ್ದು, ಈ ಬಗ್ಗೆ ಬಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಆದರೆ ಸಿಬ್ಬಂದಿ ಅವರ ಮಾತಿಗೆ ಯಾವುದೇ ಬೆಲೆ ಕೊಡಲಿಲ್ಲ. ಮರುದಿನ ಬೆಂಗಳೂರು ತಲುಪಿದಾಗ ದೀಪಿಕಾ ಅವರ ಕುತ್ತಿಗೆ, ಬೆನ್ನು ಸೇರಿದಂತೆ ದೇಹದೆಲ್ಲೆಡೆ ನೋವು ಕಾಣಿಸಿಕೊಂಡಿತ್ತು. ಅಸೌಖ್ಯದಿಂದಾಗಿ ಅವರು ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತಾಗಿತ್ತು. ಈ ಬಗ್ಗೆ ವೈದ್ಯರು ಅವರಿಗೆ 15 ದಿನ ಬೆಡ್ರೆಸ್ಟ್ ಪಡೆಯುವಂತೆ ಸೂಚಿಸಿದ್ದರು.
ಈ ಸಂದರ್ಭದಲ್ಲಿ ಶೋಭರಾಜ್ ಮತ್ತು ದೀಪಿಕಾ ಜೊತೆಯಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುತ್ತಿದ್ದ ರಾಜರಾಣಿ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುತ್ತಿದ್ದರು. ಮರುದಿನ ಶೂಟಿಂಗ್ ಇದ್ದುದರಿಂದ ತುರ್ತಾಗಿ ಮಂಗಳೂರಿಗೆ ತೆರಳಿದ್ದರು. ಬಸ್ನಲ್ಲಿ ಉಂಟಾದ ತಿಗಣೆ ಕಾಟದ ಪರಿಣಾಮ ಅಸೌಖ್ಯದಿಂದಾಗಿ ದೀಪಿಕಾ ಎರಡು ವಾರಗಳ ಕಾಲ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ದಂಪತಿಗೆ ಆರ್ಥಿಕ ನಷ್ಟವಾಗಿತ್ತು.
ಅಲ್ಲದೆ, ರಿಯಾಲಿಟಿ ಶೋನಲ್ಲಿ ಭಾಗವಹಿಸದೆ ಇದ್ದ ಈದ್ದ ಕಾರಣ ಶೋಭರಾಜ್ ಮತ್ತು ದೀಪಿಕಾ ಅವರ ತಂಡ ಇಡೀ ಕಾರ್ಯಕ್ರಮದಿಂದ ಎಲಿಮಿನೇಟ್ ಆಯಿತು. ಹಿಗಾಗಿ ಅವರಿಗೆ ಬರಬಹುದಾಗಿದ್ದ 40.000 ರೂ. ವರೆಗಿನ ಆದಾಯಕ್ಕೆ ಕತ್ತರಿ ಬಿದ್ದಿತ್ತು.
ತಿಗಣೆ ಕಾಟದ ಬಸ್ ಅವ್ಯವಸ್ಥೆಯಿಂದಾಗಿ ಬೆಸೆತ್ತ ದೀಪಿಕಾ ಮಂಗಳೂರಿನ ನ್ಯಾಯಾಲಯದಲ್ಲಿದೂರು ದಾಖಲಿಸಿದ್ದರು. ಬಸ್ ಕಂಪನಿ ಮತ್ತು ಟಿಕೆಟ್ ಬುಕ್ ಮಾಡಿದ್ದ ರೆಡ್ ಬಸ್ ವಿರುದ್ಧ ಅವರು ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣ ವಿಚಾರಣೆ ನಡೆಸಿದ ಗ್ರಾಹಕ ವ್ಯಾಜ್ಯಗಳ ಆಯೋಗದ ಅಧ್ಯಕ್ಷ ಸೋಮಶೇಖರಪ್ಪ ಹಂಡಿಗೋಲ್ ಮತ್ತು ಮಹಿಳಾ ಸದಸ್ಯ ಶಾರದಮ್ಮ ಎಚ್.ಜಿ. ಅವರು ಪ್ರಕರಣದಲ್ಲಿ ಅಂತಿಮ ಆದೇಶ ಮಾಡಿದ್ದಾರೆ.
ದೂರುದಾರರಿಗೆ ಆಗಿರುವ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ 1 ಲಕ್ಷ ರೂ. ಪರಿಹಾರವನ್ನು ವಾರ್ಷಿಕ ಶೇ. 6ರ ಬಡ್ಡಿ ದರದೊಂದಿಗೆ ನೀಡಬೇಕು ಎಂದು ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ. ಅರ್ಜಿದಾರರಿಗೆ ದಾವ ಖರ್ಚು ಆಗಿ 10 ಸಾವಿರ ರೂ. ಪರಿಹಾರ ಘೋಷಿಸಿದೆ.