ಪುಣೆ: ಫುಟ್ಪಾತ್ನಲ್ಲಿ ಮಲಗಿದ್ದವರ ಮೇಲೆ ಟ್ರಕ್ ಹರಿದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪುಣೆಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ವಾಘೋಲಿಯಲ್ಲಿ ತಡರಾತ್ರಿ 12:30ರ ಸುಮಾರಿಗೆ ಕುಡಿದ ಮತ್ತಿನಲ್ಲಿ ಟ್ರಕ್ ಚಾಲಕ ಫುಟ್ಪಾತ್ನಲ್ಲಿ ಮಲಗಿದ್ದ 9 ಕಾರ್ಮಿಕರ ಮೇಲೆ ಟ್ರಕ್ ಹರಿಸಿದ್ದಾನೆ. ಘಟನೆಯ ಪರಿಣಾಮ ಮೂವರು ಮೃತಪಟ್ಟಿದ್ದು, 6 ಮಂದಿ ಗಂಭಿರ ಗಾಯಗೊಂಡಿದ್ದಾರೆ. ಮೃತರನ್ನು ಅಮರಾವತಿ ನಿವಾಸಿಗಳಾದ ವೈಭವಿ ಪವಾರ್ (1), ವೈಭವ್ ಪವಾರ್ (2) ಮತ್ತು ವಿಶಾಲ್ ಪವಾರ್ (22) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸಾಸೂನ್ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಸಾವನ್ನಪ್ಪಿದವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಾಸೂನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಇವರು ಕಟ್ಟಡ ನಿರ್ಮಾಣ ಕೆಲಸಕ್ಕಾಗಿ ಪುಣೆಗೆ ಬಂದಿದ್ದರು. ಘಟನಾ ಸ್ಥಳಕ್ಕೆ ಎಸಿಪಿ ಖಾಡೆ, ಎಸಿಪಿ ಸೋನವಾನೆ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಘಟನೆ ಸಂಬಂಧ ಚಾಲಕನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ನಿರ್ದಾಕ್ಷಿಣ್ಯ ನರಹತ್ಯೆ ಪ್ರಕರಣ ದಾಖಲಿಸಲಾಗಿದೆ. ಪಿಐ ವಾಪೋನಿ ಪಂಡಿತ್ ರೆಜಿತ್ವಾಡ್ ನೇತೃತ್ವದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.