ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ 2022 ಮತ್ತು 2023ನೇ ಸಾಲಿನ ಪುಸ್ತಕ ಬಹುಮಾನ ಮತ್ತು ದತ್ತಿನಿಧಿ ಪ್ರಶಸ್ತಿ ಪ್ರಕಟವಾಗಿದೆ. ಪುಸ್ತಕ ಪ್ರಶಸ್ತಿಯು 25,000 ರೂ.ನಗದು, ದತ್ತಿನಿಧಿ ಪ್ರಶಸ್ತಿಯು 10,000 ರೂ.ನಗದು ಹಾಗೂ ಸ್ಮರಣಿಕೆ, ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ.
2022ನೇ ಸಾಲಿನ ಪುಸ್ತಕ ಬಹುಮಾನದ ಕವನ ವಿಭಾಗದಲ್ಲಿ ರಾಜೇಶ್ ಶೆಟ್ಟಿ ದೋಟರ ‘ಮುಗದಾರಗೆ’ ಮತ್ತು 2023ನೇ ಸಾಲಿನ ಪುಸ್ತಕ ಬಹುಮಾನದ ಕವನ ವಿಭಾಗದಲ್ಲಿ ರಘು ಇದ್ದಿದು ಅವರ ‘ಎನ್ನ ನಲಿಕೆ’ ಮತ್ತು ಕಾದಂಬರಿ ವಿಭಾಗದಲ್ಲಿ ರಾಜಶ್ರೀ ಟಿ. ರೈ ಪೆರ್ಲರ ‘ಮುಸ್ರಾಲೊ ಪಟ್ರೊ’, ಅನುವಾದ ವಿಭಾಗದಲ್ಲಿ ಕುಶಾಲಾಕ್ಷಿ ವಿ. ಕುಲಾಲ್ರ ‘ತಗೊರಿ ಮಿತ್ದ ಮಣ್ಣ’ ಕೃತಿ ಆಯ್ಕೆಯಾಗಿದೆ.
2022ನೇ ಸಾಲಿನ ಉಷಾ ಪಿ. ರೈ ದತ್ತಿನಿಧಿ ಪ್ರಶಸ್ತಿಗೆ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ರ ‘ತುಳು ಕಾವ್ಯ ಮೀಮಾಂಸೆ’ ಮತ್ತು 2023ನೇ ಸಾಲಿನ ಉಷಾ ಪಿ. ರೈ ದತ್ತಿನಿಧಿ ಪ್ರಶಸ್ತಿಗೆ ಡಾ. ಚಿನ್ನಪ್ಪ ಗೌಡರ ಕರಾವಳಿ ಕಥನ ಕೃತಿ ಆಯ್ಕೆಯಾಗಿದೆ.
2022ನೇ ಸಾಲಿನ ಕೆ.ಅಮರನಾಥ ಶೆಟ್ಟಿದತ್ತಿನಿಧಿ ಪ್ರಶಸ್ತಿಗೆ ಯಶೋಧಾ ಮೋಹನ್ರ ‘ದೇರ ಮಾಮುನ ದೂರ ನೋಟೊಲು’ ಮತ್ತು 2023ನೇ ಸಾಲಿನ ಕೆ.ಅಮರನಾಥ ಶೆಟ್ಟಿ ದತ್ತಿನಿಧಿ ಪ್ರಶಸ್ತಿಗೆ ಡಾ.ವಿ.ಕೆ.ಯಾದವ್ ರ ‘ಮೊಗವೀರರ್ ನ ಸಾಂಸ್ಕೃತಿಕ ಬದ್ ಬೊಕ್ಕ ಆರ್ಥಿಕ ಚಿಂತನೆ’ ಹಾಗೂ 2022ನೇ ಸಾಲಿನ ಶಿವಾನಂದ ಕರ್ಕೇರ ದತ್ತಿನಿಧಿ ಪ್ರಶಸ್ತಿಗೆ ಶಾರದಾ ಅಂಚನ್ರ ‘ನಂಬಿ ಸತ್ತೊಲು’, 2023ನೇ ಸಾಲಿನ ಶಿವಾನಂದ ಕರ್ಕೇರ ದತ್ತಿನಿಧಿ ಪ್ರಶಸ್ತಿಗೆ ರಘುನಾಥ ವರ್ಕಾಡಿ, ಅವರ ‘ಸೂರ್ಯಚಂದ್ರ ಸಿರಿ’ ಕತಿ ಆಯ್ಕೆಯಾಗಿದೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಾ.15 ರ ಬೆಳಿಗ್ಗೆ 10 ಕ್ಕೆ ತುಳುಭವನದ ಅಮೃತ ಸೋಮೇಶ್ವರ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.