ಬೆಂಗಳೂರು: ವಿಧಾನಸಭೆ ಇಂದೂ ತುಳುಮಯವಾದ ಕ್ಷಣವೊಂದು ಒದಗಿಬಂತು. ವಿಧಾನಸಭೆಯಲ್ಲಿ ಮುಡಾ ಅಕ್ರಮದ ಬಗ್ಗೆ ಚರ್ಚೆಗೆ ಬಿಜೆಪಿ ಶಾಸಕರು ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದ್ದಾರೆ. ಒಂದು ಗಂಟೆ ಚರ್ಚೆಗೆ ಅವಕಾಶ ಕೊಡಿ ಎಂದು ಬಿಜೆಪಿ ಶಾಸಕರು ಆಗ್ರಹಿಸಿದರು. ಇದೇ ವೇಳೆ ತುಳು ಭಾಷೆಯಲ್ಲಿ ಮಾತನಾಡಿದ ಶಾಸಕ ಸುನಿಲ್ ಕುಮಾರ್, ಸ್ಪೀಕರ್ಗೆ ಚರ್ಚೆಗೆ ಕೋರಿದರು. ತುಳುವಿನಲ್ಲಿ ಮಾತನಾಡಿದ ಶಾಸಕ ಸುನಿಲ್ ಕುಮಾರ್, ಚರ್ಚೆಗೆ ಅವಕಾಶ ಕೊಟ್ಟರೆ ಏನು ಸಮಸ್ಯೆ? ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ. ಖಾದರ್ ಸಮಸ್ಯೆ ಏನೂ ಇಲ್ಲ ಎಂದು ತುಳುವಿನಲ್ಲೇ ಉತ್ತರ ನೀಡಿದರು. ಆದರೆ ಚರ್ಚೆಗೆ ಅವಕಾಶ ಮಾತ್ರ ನೀಡಲಿಲ್ಲ. ಬಳಿಕ, ನಾನು ಹೇಳಿದ ಹಾಗೆ ಕೇಳಿದರೆ ನಿಮಗೆ ಏನು ಸಮಸ್ಯೆ? ಎಂದು ತುಳುವಿನಲ್ಲೇ ಸ್ಪೀಕರ್ ಮರುಪ್ರಶ್ನೆ ಹಾಕಿದರು. ಈ ವೇಳೆ ಯಾವುದೋ ಭಾಷೆಯಲ್ಲಿ ಮಾತನಾಡುತ್ತಿದ್ದೀರಾ? ಎಂದು ಕೆಲವು ಶಾಸಕರು ತಮಾಷೆ ಮಾಡಿದರು. ಯಾವುದೋ ಅಲ್ಲ, ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ ಇರುವ ತುಳು ಭಾಷೆ ಎಂದು ಸ್ಪೀಕರ್ ಸಮರ್ಥಿಸಿಕೊಂಡರು.
ಸ್ಪೀಕರ್ ಸ್ಥಾನದಲ್ಲಿ ತುಳುನಾಡಿನವರು ಇರುವುದರಿಂದ ಈ ಬಾರಿ ವಿಧಾನಸಭಾ ಅಧಿವೇಶನಗಳಲ್ಲಿ ಆಗಾಗ ತುಳು ಭಾಷೆ ಇಡೀ ಅಧಿವೇಶನವನ್ನು ಆವರಿಸುತ್ತಿದೆ. ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಸ್ಥಾನಮಾನ ನೀಡುವಂತೆ ಆಗ್ರಹ ಕೇಳಿಬರುತ್ತಿರುವ ನಡುವೆ ಅಧಿವೇಶನದಲ್ಲಿ ಆಗಾಗ ತುಳುವಿನಲ್ಲೇ ಶಾಸಕರು ಮಾತನಾಡಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ.