ಮಂಗಳೂರು: ತುಳುನಾಡಿನ ಗ್ರಾಮೀಣ ಜನರಲ್ಲಿ ಅಪೂರ್ವವಾದ ಪಾರಂಪರಿಕ ಜ್ಞಾನ ಭಂಡಾರ ಇತ್ತು, ಇದನ್ನು ಸೂಕ್ತವಾಗಿ ದಾಖಲೀಕರಣ ಮಾಡುವ ಅವಶ್ಯಕತೆ ಇದೆ ಎಂದು ಸತೀಶ್ ಪೈ-ದಯಾನಂದ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಕರ ಭಂಡಾರಿ ಎಂ ಹೇಳಿದರು.ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನದಲ್ಲಿ ಆಯೋಜಿಸಲಾದ ಅಕಾಡೆಮಿ ಪ್ರಕಟಿತ ಮಣಿ ಮನಮೋಹನ ರೈ ಅವರ ‘ತುಳುವರೆ ಪ್ರಾಣಿ ವೈದ್ಯ ಒಂಜಿ ಸ್ಥೂಲ ಅಧ್ಯಯನ’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ನಮ್ಮ ಪಾರಂಪರಿಕ ಸಸ್ಯ ಜನ್ಯ ಚಿಕಿತ್ಸಾ ಪದ್ಧತಿಯು ಆಧುನಿಕ ವೈದ್ಯಕೀಯ ಔಷಧಿಯಲ್ಲಿ ಕೂಡ ಬಳಕೆಯಾಗುತ್ತಿರುವುದನ್ನು ಕಾಣಬಹುದು ಇಂತ ಸಂದರ್ಭದಲ್ಲಿ ಪಾರಂಪರಿಕವಾಗಿ ನಮ್ಮ ಜನರಿಗೆ ಇದ್ದಂತಹ ಔಷದೋಪಚಾರದ ಮಾಹಿತಿಗಳನ್ನು ದಾಖಲೀಕರಣ ಮಾಡದಿದ್ದರೆ ಮುಂದೆ ಈ ದೇಶೀಯ ಜ್ಞಾನ ಪರಂಪರೆಯು ನಮ್ಮಿಂದ ಕೈ ತಪ್ಪುವ ಆತಂಕ ಇದೆ ಎಂದು ಎಂದು ಪ್ರೊ. ಜಯಕರ ಭಂಡಾರಿ ಅಭಿಪ್ರಾಯಪಟ್ಟರು.
ಲೇಖಕಿ ವಿಜಯಲಕ್ಷ್ಮೀ ಪ್ರಸಾದ್ ರೈ ಇವರು ಪುಸ್ತಕದ ಪರಿಚಯ ಮಾಡಿಕೊಟ್ಟರು. ಜಾನಪದ ಸಂಶೋಧಕ ಡಾ.ಅಶೋಕ್ ಆಳ್ವ ಅವರು ಶುಭಕೋರಿ ಮಾತನಾಡಿದರು.
ಲೇಖಕಿ ಮಣಿ ಎಂ ರೈ ಅವರು ಈ ಪುಸ್ತಕ ಬರವಣಿಗೆಯ ತನ್ನ ಕ್ಷೇತ್ರ ಕಾರ್ಯದ ಬಗ್ಗೆ ಮಾತನಾಡಿದರು. ತೋಕುರು ಗುತ್ತು ದಿವಾಕರ ಆಳ್ವ, ಮನಮೋಹನ್ ರೈ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು, ಅಕಾಡೆಮಿ ಸದಸ್ಯರಾದ ಬಾಬು ಪಾಂಗಾಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.